|
1
|
ಇದಂ ತು ತೇ ಗುಹ್ಯ-ತಮಂ ಪ್ರವಕ್ಷ್ಯಾಮ್ಯನಸೂಯವೇ ।
ಜ್ಞಾನಂ ವಿಜ್ಞಾನ-ಸಹಿತಂ ಯಜ್ಜ್ಞಾತ್ವಾ ಮೋಕ್ಷ್ಯಸೇಽಶುಭಾತ್ ॥ |
|
ಅಸೂಯೆ ಇಲ್ಲದ ನಿನಗೆ ವಿಜ್ಞಾನದೊಡನೆ ಜ್ಞಾನವನ್ನು ಹೇಳುತ್ತೇನೆ. ಇದು ತುಂಬ ಗುಟ್ಟಿನ ವಿಷಯ. ಇದನ್ನು ತಿಳಿದಾಗ ಕೆಡುಕಿನಿಂದ ಬಿಡುಗಡೆ ಹೊಂದುವೆ. |
|
2
|
ರಾಜ-ವಿದ್ಯಾ ರಾಜ-ಗುಹ್ಯಂ ಪವಿತ್ರಮಿದಮುತ್ತಮಮ್ ।
ಪ್ರತ್ಯಕ್ಷಾವ-ಗಮಂ ಧರ್ಮ್ಯಂ ಸುಸುಖಂ ಕರ್ತುಮವ್ಯಯಮ್ ॥ |
|
ಇದು ದೊಡ್ಡ ವಿದ್ಯೆ, ದೊಡ್ಡ ರಹಸ್ಯ; ಪವಿತ್ರವಾದದ್ದು, ಉತ್ತಮವಾದುದು. ದೇವನ ಎಚ್ಚರ ನೀಡುವುದು, ವಿಶ್ವಧಾರಕನಿಗೆ ಸಂಬಂಧಿಸಿದ್ದು, ಮಾಡಲು ಸುಲಭವಾದುದು, ನಾಶವಿಲ್ಲದ್ದು. |
|
3
|
ಅಶ್ರದ್ದಧಾನಾಃ ಪುರುಷಾಃ ಧರ್ಮಸ್ಯಾಸ್ಯ ಪರಂ-ತಪ ।
ಅಪ್ರಾಪ್ಯ ಮಾಂ ನಿವರ್ತಂತೇ ಮೃತ್ಯು-ಸಂಸಾರ-ವರ್ತ್ಮನಿ ॥ |
|
ಓ ಪರಂತಪನೆ, ಈ ಧರ್ಮದಲ್ಲಿ ಶ್ರದ್ಧೆ ಇಲ್ಲದವರು ನನ್ನನ್ನು ಪಡೆಯದೆ, ಮರಣಮಯ ಸಂಸಾರದ ದಾರಿಯಲ್ಲಿಯೆ ಬೀಳುತ್ತಾರೆ. |
|
4
|
ಮಯಾ ತತಮಿದಂ ಸರ್ವಂ ಜಗದವ್ಯಕ್ತ-ಮೂರ್ತಿನಾ ।
ಮತ್ಸ್ಥಾನಿ ಸರ್ವ-ಭೂತಾನಿ ನಚಾಹಂ ತೇಷ್ವವಸ್ಥಿತಃ ॥ |
|
ನಾನು ಕಾಣದ ರೂಪದಿಂದ ಈ ಜಗತ್ತನ್ನು ಪೂರ್ತಿ ತುಂಬಿದ್ದೇನೆ. ಮತ್ತು ಎಲ್ಲವೂ ಆಸರೆ ಪಡೆದು ನನ್ನಲ್ಲಿಯೆ ಇದೆ. ಅವುಗಳ ಆಸರೆಯಲ್ಲಿ ನಾನು ಇಲ್ಲ. |
|
5
|
ನ ಚ ಮತ್ಸ್ಥಾನಿ ಭೂತಾನಿ ಪಶ್ಯ ಮೇ ಯೋಗಮೈಶ್ವರಮ್ ।
ಭೂತ-ಭೃನ್ನ ಚ ಭೂತ-ಸ್ಥೋ ಮಮಾಽತ್ಮಾ ಭೂತ-ಭಾವನಃ ॥ |
|
ಪಂಚಭೂತಗಳು ನನ್ನಲ್ಲಿ ಇಲ್ಲ. ನನ್ನ ದೊರೆತನದ ರೀತಿಯನ್ನು ನೋಡು. ನನ್ನ ದೇಹವು ಪಂಚಭೂತಗಳನ್ನು ಹೊತ್ತಿದೆ, ಆದರೆ ಪಂಚಭೂತಗಳ ವಿಕಾರವಾಗಿಲ್ಲ. ನಾನು ಪಂಚಭೂತಗಳಿಂದ ಸೃಷ್ಟಿಯನ್ನು ನಡೆಸುತ್ತೇನೆ. |
|
6
|
ಯಥಾಽಽಕಾಶ-ಸ್ಥಿತೋ ನಿತ್ಯಂ ವಾಯುಃ ಸರ್ವತ್ರ-ಗೋ ಮಹಾನ್ ।
ತಥಾ ಸರ್ವಾಣಿ ಭೂತಾನಿ ಮತ್ಸ್ಥಾನೀತ್ಯುಪ-ಧಾರಯ ॥ |
|
ಎಲ್ಲೆಡೆಯೂ ತುಂಬಿರುವ ಗಾಳಿ ಯಾವಾಗಲೂ ಆಕಾಶದಲ್ಲಿಯೆ ಇರುವಂತೆ, ಎಲ್ಲವೂ ನನ್ನಲ್ಲಿಯೆ ಆಸರೆ ಪಡೆದು ಇವೆ ಎಂದೇ ಚಿಂತನೆ ಮಾಡು. |
|
7
|
ಸರ್ವ-ಭೂತಾನಿ ಕೌಂತೇಯ ಪ್ರಕೃತಿಂ ಯಾಂತಿ ಮಾಮಿಕಾಮ್ ।
ಕಲ್ಪ-ಕ್ಷಯೇ ಪುನಸ್ತಾನಿ ಕಲ್ಪಾದೌ ವಿ-ಸೃಜಾಮ್ಯಹಮ್ ॥ |
|
ಓ ಕೌಂತೇಯನೆ, ಬ್ರಹ್ಮಕಲ್ಪಕಾಲ ಮುಗಿದಾಗ ಎಲ್ಲವೂ ನನ್ನ ಅಧೀನವಾದ ಮೂಲಪ್ರಕೃತಿಯನ್ನು ಸೇರುತ್ತವೆ. ಕಲ್ಪದ ಆರಂಭದಲ್ಲಿ ಮತ್ತೆ ಅವೆಲ್ಲವನ್ನೂ ನಾನು ಸೃಷ್ಟಿಸುತ್ತೇನೆ. |
|
8
|
ಪ್ರಕೃತಿಂ ಸ್ವಾಮವಷ್ಟಭ್ಯ ವಿ-ಸೃಜಾಮಿ ಪುನಃ-ಪುನಃ ।
ಭೂತ-ಗ್ರಾಮಮಿಮಂ ಕೃತ್ಸ್ನಂ ಅವಶಂ ಪ್ರಕೃತೇರ್ವಶಾತ್ ॥ |
|
ಪ್ರಕೃತಿಯನ್ನು ಬಳಸಿ ಈ ಪರತಂತ್ರವಾದ ಸಂಪೂರ್ಣ ವಿಶ್ವವನ್ನು ನನ್ನ ಇಚ್ಛೆಯಂತೆ ಮತ್ತೆ ಮತ್ತೆ ಸೃಷ್ಟಿಸುತ್ತೇನೆ. |
|
9
|
ನ ಚ ಮಾಂ ತಾನಿ ಕರ್ಮಾಣಿ ನಿಬಧ್ನಂತಿ ಧನಂ-ಜಯ ।
ಉದಾಸೀನವದಾಸೀನಂ ಅಸಕ್ತಂ ತೇಷು ಕರ್ಮಸು ॥ |
|
ಓ ಧನಂಜಯನೆ, ಆ ಸೃಷ್ಟಿಕರ್ಮಗಳಲ್ಲಿ ಅಂಟಿಕೊಳ್ಳದೆ ಮಾಡಿಯೂ ಮಾಡದವನಂತೆ ನಾನು ಇದ್ದೇನೆ. ಆದ್ದರಿಂದ ಆ ಕರ್ಮಗಳು ನನ್ನನ್ನು ಕಟ್ಟಿ ಹಾಕುವುದಿಲ್ಲ. |
|
10
|
ಮಯಾಽಧ್ಯಕ್ಷೇಣ ಪ್ರಕೃತಿಃ ಸೂಯತೇ ಸ-ಚರಾಚರಮ್ ।
ಹೇತುನಾಽನೇನ ಕೌಂತೇಯ ಜಗದ್ ವಿಪರಿ-ವರ್ತತೇ ॥ |
|
ಓ ಕೌಂತೇಯನೆ, ಜೀವ-ಜಡಗಳ ಈ ವಿಶ್ವವನ್ನು ಪ್ರಕೃತಿಯು ನನ್ನ ಸಾಕ್ಷಿ(ಅಧ್ಯಕ್ಷ)ತನದಲ್ಲಿಯೆ ಹಡೆಯುತ್ತದೆ. ಈ ಕಾರಣದಿಂದಲೆ ಜಗತ್ತು ಬದಲಾಗುತ್ತಲೆ ಇರುತ್ತದೆ. (ಮತ್ತೆ ಮತ್ತೆ ಸೃಷ್ಟಿ-ಲಯಗಳನ್ನು ಪಡೆಯುತ್ತದೆ) |
|
11
|
ಅವ-ಜಾನಂತಿ ಮಾಂ ಮೂಢಾ ಮಾನುಷೀಂ ತನುಮಾಶ್ರಿತಮ್ ।
ಪರಂ ಭಾವಮಜಾನಂತೋ ಮಮ ಭೂತ-ಮಹೇಶ್ವರಮ್ ॥ |
|
ಪಂಚಭೂತಗಳ ಪ್ರಪಂಚಕ್ಕೆ ಸ್ವಾಮಿಯಾದ ನನ್ನ, ಪಂಚಭೂತಗಳಿಲ್ಲದ ನೈಜ ಸ್ವರೂಪವನ್ನು ತಿಳಿಯದವರು ಮನುಷ್ಯರಂತೆ ಕಾಣುವ ದೇಹವನ್ನು ಪಡೆದಿರುವ ನನ್ನನ್ನು ಮನುಷ್ಯನೆಂದೆ ತಪ್ಪಾಗಿ ತಿಳಿದು ಕಡೆಗಣಿಸುತ್ತಾರೆ. |
|
12
|
ಮೋಘಾಶಾ ಮೋಘ-ಕರ್ಮಾಣೋ ಮೋಘ-ಜ್ಞಾನಾ ವಿಚೇತಸಃ ।
ರಾಕ್ಷಸೀಮಾಸುರೀಂ ಚೈವ ಪ್ರಕೃತಿಂ ಮೋಹಿನೀಂ ಶ್ರಿತಾಃ ॥ |
|
ತಪ್ಪು ತಿಳಿದ ಇವರ ಆಸೆಗಳು, ಕರ್ಮಗಳು, ಜ್ಞಾನವೂ ವ್ಯರ್ಥ. ಮೋಹಕವಾದ, ರಾಕ್ಷಸರ-ಅಸುರರ ತಾಮಸ ಸ್ವಭಾವವನ್ನು ಆಶ್ರಯಿಸಿದವರು. |
|
13
|
ಮಹಾತ್ಮಾನಸ್ತು ಮಾಂ ಪಾರ್ಥ ದೈವೀಂ ಪ್ರಕೃತಿಮಾಶ್ರಿತಾಃ ।
ಭಜಂತ್ಯನನ್ಯ-ಮನಸೋ ಜ್ಞಾತ್ವಾ ಭೂತಾದಿಮವ್ಯಯಮ್ ॥ |
|
ಓ ಪಾರ್ಥನೆ, ಸಾತ್ವಿಕಸ್ವಭಾವವನ್ನು ಆಶ್ರಯಿಸಿದ ಉತ್ತಮಜೀವರು ಬೇರೆ ದೇವತೆಗಳಲ್ಲಿ ಮನಸ್ಸಿಡದೆ, ನಾಶವಿಲ್ಲದ ನನ್ನನ್ನೆ ಜಗತ್ತಿನ ಸೃಷ್ಟಿಗೆ ಕಾರಣನನ್ನಾಗಿ ತಿಳಿದು ಸೇವೆ ಮಾಡುತ್ತಾರೆ. |
|
14
|
ಸತತಂ ಕೀರ್ತಯಂತೋ ಮಾಂ ಯತಂತಶ್ಚ ದೃಢ-ವ್ರತಾಃ ।
ನಮಸ್ಯಂತಶ್ಚ ಮಾಂ ಭಕ್ತ್ಯಾ ನಿತ್ಯ-ಯುಕ್ತಾ ಉಪಾಸತೇ ॥ |
|
ಆಚಾರನಿಷ್ಠರಾಗಿ ಪ್ರತಿದಿನವೂ ನನ್ನನ್ನೇ ಪ್ರಯತ್ನಪಟ್ಟು ಜಪಿಸುತ್ತಾರೆ. ಭಕ್ತಿಯಿಂದ ನನ್ನನ್ನೆ ನಮಿಸುತ್ತಾರೆ. ಶಾಸ್ತ್ರನಿಯಮಗಳನ್ನು ತಪ್ಪದೇ ನನ್ನ ಉಪಾಸನೆ ನಡೆಸುತ್ತಾರೆ. |
|
15
|
ಜ್ಞಾನ-ಯಜ್ಞೇನ ಚಾಪ್ಯನ್ಯೇ ಯಜಂತೋ ಮಾಮುಪಾಸತೇ ।
ಏಕತ್ವೇನ ಪೃಥಕ್ತ್ವೇನ ಬಹುಧಾ ವಿಶ್ವತೋ-ಮುಖಮ್ ॥ |
|
ಪಾಠ-ಪ್ರವಚನದ ಮೂಲಕ ಪೂಜಿಸುವ ಕೆಲವರು, ಎಲ್ಲರೊಳಗೂ ನಾನೊಬ್ಬನೆ ಇರುವೆನೆಂದು, ಎಲ್ಲಕ್ಕಿಂತ ಬೇರೆಯಾಗಿಯೆ ಇರುವೆನೆಂದು ವಿಶ್ವವ್ಯಾಪಿಯಾದ ನನ್ನನ್ನು ಬಹಳ ರೀತಿಯಲ್ಲಿ ಉಪಾಸನೆ ಮಾಡುತ್ತಾರೆ. |
|
16
|
ಅಹಂ ಕ್ರತುರಹಂ ಯಜ್ಞಃ ಸ್ವಧಾಽಹಮಹಮೌಷಧಮ್ ।
ಮಂತ್ರೋಽಹಮಹಮೇವಾಽಜ್ಯಂ ಅಹಮಗ್ನಿರಹಂ ಹುತಮ್ ॥ |
|
ಕ್ರತು (ಬಲಿ ಇರುವ ಯಾಗ), ಯಜ್ಞ (ಬಲಿ ಇರದ ಯಾಗ), ಸ್ವಧಾ (ಶ್ರಾದ್ಧ), ಔಷಧ (ಆಹಾರ), ಮಂತ್ರ, ತುಪ್ಪ, ಅಗ್ನಿ, ಹವಿಸ್ಸು - ಎಲ್ಲವೂ ನಾನೇ. |
|
17
|
ಪಿತಾಽಹಮಸ್ಯ ಜಗತೋ ಮಾತಾ ಧಾತಾ ಪಿತಾಮಹಃ ।
ವೇದ್ಯಂ ಪವಿತ್ರಮೋಂಕಾರಃ ಋಕ್ ಸಾಮ ಯಜುರೇವ ಚ ॥ |
|
ನಾನು ಈ ಜಗತ್ತಿನ ತಂದೆ, ತಾಯಿ, ಪೋಷಕ, ಅಜ್ಜ ಮತ್ತು ಎಲ್ಲರಿಂದಲೂ ತಿಳಿಯಬೇಕಾದವನು ನಾನು. ನಾನೇ ಪವಿತ್ರನು, ಓಂಕಾರನು. ಋಕ್, ಸಾಮ, ಯಜುಸ್. |
|
18
|
ಗತಿರ್ಭರ್ತಾ ಪ್ರಭುಃ ಸಾಕ್ಷೀ ನಿವಾಸಃ ಶರಣಂ ಸುಹೃತ್ ।
ಪ್ರಭವಃ ಪ್ರಳಯಃ ಸ್ಥಾನಂ ನಿಧಾನಂ ಬೀಜಮವ್ಯಯಮ್ ॥ |
|
ನಾನು ಗತಿ, ಭರ್ತೃ, ಪ್ರಭು, ಸಾಕ್ಷಿಯು, ನೆಲೆ, ಆಸರೆ, ಒಳ್ಳೆಯವನು. ಎಲ್ಲದರ ಸೃಷ್ಟಿ-ಸ್ಥಿತಿ-ಲಯಗಳಿಗೆ ಕಾರಣನು. ಎಲ್ಲಕ್ಕೂ ವಿಕಾರವಿಲ್ಲದ ಬೀಜನು ಮತ್ತು ಪಾತ್ರನು. |
|
19
|
ತಪಾಮ್ಯಹಮಹಂ ವರ್ಷಂ ನಿಗೃಹ್ಣಾಮ್ಯುತ್ಸೃಜಾಮಿ ಚ ।
ಅಮೃತಂ ಚೈವ ಮೃತ್ಯುಶ್ಚ ಸದಸಚ್ಚಾಹಮರ್ಜುನ ॥ |
|
ಓ ಅರ್ಜುನನೆ, ನಾನು ಸುಡುತ್ತೇನೆ. ನಾನು ಮಳೆಯನ್ನು ತಡೆಯುತ್ತೇನೆ ಮತ್ತು ನೀಡುತ್ತೇನೆ. ಮೋಕ್ಷ ಮತ್ತು ಮರಣ ನನ್ನಿಂದಲೆ. ಕಾಣುವ ಕಾರ್ಯವೂ ಕಾಣದ ಕಾರಣವೂ ನನ್ನಿಂದ. |
|
20
|
ತ್ರೈವಿದ್ಯಾ ಮಾಂ ಸೋಮ-ಪಾಃ ಪೂತ-ಪಾಪಾಃ
ಯಜ್ಞೈರಿಷ್ಟ್ವಾಸ್ವರ್ಗತಿಂ ಪ್ರಾರ್ಥಯಂತೇ ।
ತೇ ಪುಣ್ಯಮಾಸಾಧ್ಯ ಸುರೇಂದ್ರ-ಲೋಕಂ
ಅಶ್ನಂತಿ ದಿವ್ಯಾನ್ ದಿವಿ ದೇವ-ಭೋಗಾನ್ ॥ |
|
ಮೂರು ವೇದಗಳ ಮೂಲಕ ಕರ್ಮ ನಡೆಸುವವರು ಸ್ವರ್ಗವನ್ನು ಪಡೆಯಲು ಬಯಸುತ್ತಾರೆ. ಅವರು ಯಜ್ಞಗಳಿಂದ ನನ್ನನ್ನು ಆರಾಧಿಸಿ, ಸೋಮರಸ ಕುಡಿದು, ಪಾಪ ಕಳೆದು ಶುದ್ಧರಾಗಿ, ಪುಣ್ಯದ ಫಲವಾಗಿ ಇಂದ್ರನ ಲೋಕವೆನಿಸಿದ ಸ್ವರ್ಗವನ್ನು ಸೇರುತ್ತಾರೆ. ಅಲ್ಲಿ ಸುರರಿಗೆ ಸಮನಾದ ದಿವ್ಯಭೋಗಗಳನ್ನು ಪಡೆಯುತ್ತಾರೆ. |
|
21
|
ತೇ ತಂ ಭುಕ್ತ್ವಾ ಸ್ವರ್ಗ-ಲೋಕಂ ವಿಶಾಲಂ
ಕ್ಷೀಣೇ ಪುಣ್ಯೇ ಮರ್ತ್ಯ-ಲೋಕಂ ವಿಶಂತಿ ।
ಏವಂ ತ್ರಯೀ-ಧರ್ಮಮನು-ಪ್ರಪನ್ನಾಃ
ಗತಾಗತಂ ಕಾಮ-ಕಾಮಾ ಲಭಂತೇ ॥ |
|
ದೊಡ್ಡದಾದ ಆ ಸ್ವರ್ಗವನ್ನು ಅವರು ಅನುಭವಿಸಿ ಪುಣ್ಯ ಮುಗಿದಾಗ ಭೂಮಿಗೆ ಬರುತ್ತಾರೆ. ಹೀಗೆ ಬೇಕುಗಳನ್ನು ಬಯಸಿ ವೈದಿಕ ಕರ್ಮಗಳನ್ನು ನಡೆಸುವವರು ಸ್ವರ್ಗಕ್ಕೆ-ಭೂಮಿಗೆ ಹೋಗಿ-ಬರುತ್ತ ಇರುವರು. |
|
22
|
ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೇ ।
ತೇಷಾಂ ನಿತ್ಯಾಭಿ-ಯುಕ್ತಾನಾಂ ಯೋಗ-ಕ್ಷೇಮಂ ವಹಾಮ್ಯಹಮ್ ॥ |
|
ಜ್ಞಾನಿಗಳು ಇತರ ದೇವತೆಗಳನ್ನು ನೆನೆಯದೆ, ನನ್ನನ್ನೇ ಪೂರ್ತಿಯಾಗಿ ಆರಾಧಿಸುವರು. ನಿತ್ಯವೂ ನನ್ನನ್ನೆ ನೆನೆವ ಇವರ ಯೋಗ ಮತ್ತು ಕ್ಷೇಮವನ್ನು ನಾನು ನೋಡಿಕೊಳ್ಳುವೆನು. |
|
23
|
ಯೇಽಪ್ಯನ್ಯ-ದೇವತಾ-ಭಕ್ತಾಃ ಯಜಂತೇ ಶ್ರದ್ಧಯಾಽನ್ವಿತಾಃ ।
ತೇಽಪಿ ಮಾಮೇವ ಕೌಂತೇಯ ಯಜಂತ್ಯವಿಧಿ-ಪೂರ್ವಕಮ್ ॥ |
|
ಓ ಕೌಂತೇಯನೆ, ಕೆಲವರು ಇತರ ದೇವತೆಗಳನ್ನು ಭಕ್ತಿಯಿಂದ ಶ್ರದ್ಧೆಯಿಂದ ಪೂಜಿಸುತ್ತಾರೆ, ಅಂಥವರೂ ನನ್ನನ್ನೇ ಆರಾಧಿಸಿದ್ದು, ಆದರೆ ಶಾಸ್ತ್ರ ಹೇಳಿದಂತಲ್ಲ, ತಪ್ಪಾಗಿ. |
|
24
|
ಅಹಂ ಹಿ ಸರ್ವ-ಯಜ್ಞಾನಾಂ ಭೋಕ್ತಾ ಚ ಪ್ರಭುರೇವ ಚ ।
ನತು ಮಾಮಭಿ-ಜಾನಂತಿ ತತ್ತ್ವೇನಾತಶ್ಚ್ಯವಂತಿ ತೇ ॥ |
|
ನನ್ನಿಂದಲೆ ಎಲ್ಲರ ಎಲ್ಲ ಬಗೆಯ ಪೂಜಾ ಕೈಂಕರ್ಯಗಳು ನಡೆಯುವುದು. ಹಾಗಾಗಿ, ನಾನೇ ಎಲ್ಲಾ ಪೂಜೆಗಳನ್ನು ಪಡೆಯುವವನು. ನಿಜವಾಗಿ ನನ್ನನ್ನು ಅವರು ಪೂರ್ತಿ ತಿಳಿದಿಲ್ಲ. ಆದ್ದರಿಂದ ಅವರು ತೊಂದರೆ ಪಡುತ್ತಾರೆ. |
|
25
|
ಯಾಂತಿ ದೇವ-ವ್ರತಾ ದೇವಾನ್ ಪಿತೄನ್ ಯಾಂತಿ ಪಿತೃ-ವ್ರತಾಃ ।
ಭೂತೇಜ್ಯಾ ಯಾಂತಿ ಭೂತಾನಿ ಯಾಂತಿ ಮದ್ಯಾಜಿನೋಽಪಿ ಮಾಮ್ ॥ |
|
ದೇವತೆಗಳನ್ನು ಆರಾಧಿಸುತ್ತ ಬಂದವರು ದೇವತೆಗಳನ್ನೆ ಸೇರುತ್ತಾರೆ. ಪಿತೃಗಳನ್ನು ಸೇವಿಸುವವರು ಪಿತೃಗಳನ್ನು ಸೇರುತ್ತಾರೆ. ದೆವ್ವಗಳ ಪೂಜೆಗೈವವರು ದೆವ್ವಗಳನ್ನು ಸೇರುವರು. ನನ್ನನ್ನು ಪೂಜಿಸುವರು ನನ್ನನ್ನೇ ಸೇರುತ್ತಾರೆ. |
|
26
|
ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾಪ್ರಯಚ್ಛತಿ ।
ತದಹಂ ಭಕ್ತ್ಯುಪ-ಹೃತಂ ಅಶ್ನಾಮಿ ಪ್ರಯತಾತ್ಮನಃ ॥ |
|
ಎಲೆಯನ್ನೊ ಹೂವನ್ನೊ ಹಣ್ಣನ್ನೊ ನೀರನ್ನೊ ನನಗೆ ಯಾರು ಭಕ್ತಿಯಿಂದ ಸಮರ್ಪಿಸುತ್ತಾನೋ ನನ್ನನ್ನೆ ನಂಬಿದ ಅವನ ಆ ಪ್ರೀತಿಯಿಂದ ಒಪ್ಪಿಸಿದ ವಸ್ತುವನ್ನು ನಾನು ಸ್ವೀಕರಿಸುವೆನು. |
|
27
|
ಯತ್ ಕರೋಷಿ ಯದಶ್ನಾಸಿ ಯಜ್ಜುಹೋಷಿ ದದಾಸಿ ಯತ್ ।
ಯತ್ತಪಸ್ಯಸಿ ಕೌಂತೇಯ ತತ್ ಕುರುಷ್ವ ಮದರ್ಪಣಮ್ ॥ |
|
ಓ ಕೌಂತೇಯನೆ, ನೀನು ಮಾಡಿದ ಯಜ್ಞ, ದಾನ, ತಪಸ್ಸು, ಕರ್ಮ, ಅಶನ ಎಲ್ಲವನ್ನೂ ನನಗೆ ಸಮರ್ಪಿಸು. |
|
28
|
ಶುಭಾಶುಭ-ಫಲೈರೇವಂ ಮೋಕ್ಷ್ಯಸೇ ಕರ್ಮ-ಬಂಧನೈಃ ।
ಸಂನ್ಯಾಸ-ಯೋಗ-ಯುಕ್ತಾತ್ಮಾ ವಿಮುಕ್ತೋ ಮಾಮುಪೈಷ್ಯಸಿ ॥ |
|
ಹೀಗೆ ಫಲದ ಆಸೆ ಬಿಟ್ಟು ಕರ್ತವ್ಯವನ್ನು ನಡೆಸುವ ನೀನು, ಒಳ್ಳೆಯ-ಕೆಟ್ಟ ಫಲಗಳನ್ನು ನೀಡುವ ಕರ್ಮಗಳ ಬಂಧನದಿಂದ ಬಿಡುಗಡೆಯನ್ನು ಪಡೆಯುವೆ. ಹೀಗಾದಾಗ ನನ್ನನ್ನು ಸೇರುವೆ. |
|
29
|
ಸಮೋಽಹಂ ಸರ್ವ-ಭೂತೇಷು ನ ಮೇ ದ್ವೇಷ್ಯೋಽಸ್ತಿ ನ ಪ್ರಿಯಃ ।
ಯೇ ಭಜಂತಿ ತು ಮಾಂ ಭಕ್ತ್ಯಾ ಮಯಿ ತೇ ತೇಷು ಚಾಪ್ಯಹಮ್ ॥ |
|
ನಾನಾಗಿ ಯಾರನ್ನೂ ಪ್ರೀತಿಸಲ್ಲ, ದ್ವೇಷಿಸಲ್ಲ. ನನಗೆ ಎಲ್ಲ ಜೀವಿಗಳೂ ಸಮ. ಆದರೆ ಯಾರು ನನ್ನನ್ನು ಭಕ್ತ್ತಿಯಿಂದ ಸೇವಿಸುತ್ತಾರೋ ಅವರು ನನ್ನವರು, ಮತ್ತೆ ನಾನು ಅವರಲ್ಲಿ ಸೇರಿದವನು. |
|
30
|
ಅಪಿ ಚೇತ್ ಸು-ದುರಾಚಾರೋ ಭಜತೇ ಮಾಮನನ್ಯ-ಭಾಕ್ ।
ಸಾಧುರೇವ ಸ ಮಂತವ್ಯಃ ಸಮ್ಯಗ್ ವ್ಯವಸಿತೋ ಹಿ ಸಃ ॥ |
|
ಬೇರೆ ದೇವತೆಗಳನ್ನು ಸೇವೆಗೈಯದೆ ನನ್ನನ್ನು ಸೇವಿಸುವವನು ಅಧರ್ಮ ಮಾಡುವವನಾದರೂ ಒಳ್ಳೆಯವನೆಂದೆ ತಿಳಿಯಬೇಕು. ಏಕೆಂದರೆ ಅವನು ಚೆನ್ನಾಗಿ ಶಾಸ್ತ್ರನಿರ್ಣಯವನ್ನು ತಿಳಿದವನು. |
|
31
|
ಕ್ಷಿಪ್ರಂ ಭವತಿ ಧರ್ಮಾತ್ಮಾ ಶಶ್ವಚ್ಛಾಂತಿಂ ನಿಗಚ್ಛತಿ ।
ಕೌಂತೇಯ ಪ್ರತಿ-ಜಾನೀಹಿ ನ ಮೇ ಭಕ್ತಃ ಪ್ರಣಶ್ಯತಿ ॥ |
|
ಅವನು ಕೂಡಲೆ ಧರ್ಮವನ್ನು ಮಾಡುವವನೂ ಆಗುತ್ತಾನೆ. ನಾಶವಾಗದ ಪೂರ್ಣಸುಖವನ್ನು ಅನುಭವಿಸುತ್ತಾನೆ. ಓ ಕೌಂತೇಯನೆ, ಆಣೆ ಮಾಡಿ ಹೇಳು - ನನ್ನ ಭಕ್ತನು ನಾಶ ಹೊಂದನು. |
|
32
|
ಮಾಂ ಹಿ ಪಾರ್ಥ ವ್ಯಪಾಶ್ರಿತ್ಯ ಯೇಽಪಿ ಸ್ಯುಃ ಪಾಪ-ಯೋನಯಃ ।
ಸ್ತ್ರಿಯೋ ವೈಶ್ಯಾಸ್ತಥಾ ಶೂದ್ರಾಃ ತೇಽಪಿ ಯಾಂತಿ ಪರಾಂ ಗತಿಮ್ ॥ |
|
ಓ ಪಾರ್ಥನೆ, ಸ್ತ್ರೀಯರು, ವೈಶ್ಯರು, ಶೂದ್ರರು, ಕೆಟ್ಟಜನ್ಮವನ್ನು ಪಡೆದವರು, ಎಲ್ಲರೂ ನನ್ನನ್ನೇ ಆಶ್ರಯಿಸಿ ಆರಾಧಿಸಿ ಉತ್ತಮ ಗತಿಯನ್ನೇ ಹೊಂದಿದ್ದಾರೆ. |
|
33
|
ಕಿಂ ಪುನರ್ಬ್ರಾಹ್ಮಣಾಃ ಪುಣ್ಯಾಃ ಭಕ್ತಾ ರಾಜರ್ಷಯಸ್ತಥಾ ।
ಅನಿತ್ಯಮಸುಖಂ ಲೋಕಂ ಇಮಂ ಪ್ರಾಪ್ಯ ಭಜಸ್ವ ಮಾಮ್ ॥ |
|
ಮತ್ತೆ ಬ್ರಾಹ್ಮಣರು, ಒಳ್ಳೆಯ ಜನ್ಮವನ್ನು ಪಡೆದವರು, ರಾಜರು, ಋಷಿಗಳು ಇವರೆಲ್ಲರೂ ನನ್ನ ಭಕ್ತರು ಉತ್ತಮ ಗತಿಯನ್ನು ಪಡೆದಿದ್ದಾರೆಯೆ. ಹೀಗೆ ನಿತ್ಯವಲ್ಲದ, ಸುಖವಿಲ್ಲದ ಈ ಲೋಕಕ್ಕೆ ಬಂದಾಗ ನನ್ನನ್ನು ಆರಾಧಿಸು. |
|
34
|
ಮನ್ಮನಾ ಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕುರು ।
ಮಾಮೇವೈಷ್ಯಸಿ ಯುಕ್ತ್ವೈವಂ ಆತ್ಮಾನಂ ಮತ್ಪರಾಯಣಃ ॥ |
|
ನನ್ನಲ್ಲೇ ಮನಸ್ಸಿಡು, ನನ್ನ ಭಕ್ತನಾಗು. ನನ್ನನ್ನೇ ಪೂಜಿಸು. ನನ್ನನ್ನೇ ನಮಿಸು. ನಾನೇ ಸರ್ವೋತ್ತಮನೆಂದು ನನ್ನನ್ನು ಆಶ್ರಯಿಸು. ಹೀಗೆ ನಿನ್ನನ್ನು ತೊಡಗಿಸಿದರೆ ನನ್ನನ್ನೇ ಸೇರುವೆ. |