|
ಅರ್ಜುನ
ಉವಾಚ
|
|
1
|
ಪ್ರಕೃತಿಂ ಪುರುಷಂ ಚೈವ ಕ್ಷೇತ್ರಂ ಕ್ಷೇತ್ರಜ್ಞಮೇವ ಚ
ಏತದ್ ವೇದಿತುಮಿಚ್ಛಾಮಿ ಜ್ಞಾನಂ ಜ್ಞೇಯಂ ಚ ಕೇಶವ ॥ |
|
ಅರ್ಜುನನು ಹೇಳಿದನು - ಓ ಕೇಶವನೆ, ಪ್ರಕೃತಿ, ಪುರುಷ, ಕ್ಷೇತ್ರ, ಕ್ಷೇತ್ರಜ್ಞ, ಜ್ಞಾನ ಮತ್ತು ಜ್ಞೇಯ ಇವುಗಳನ್ನು ತಿಳಿಯಲು ಬಯಸುತ್ತೇನೆ. |
|
ಭಗವಾನ್
ಉವಾಚ
|
|
2
|
ಇದಂ ಶರೀರಂ ಕೌಂತೇಯ ಕ್ಷೇತ್ರಮಿತ್ಯಭಿ-ಧೀಯತೇ ।
ಏತದ್ ಯೋ ವೇತ್ತಿ ತಂ ಪ್ರಾಹುಃ ಕ್ಷೇತ್ರಜ್ಞ ಇತಿ ತದ್ವಿದಃ ॥ |
|
ಕೃಷ್ಣನು ಹೇಳಿದನು - ಓ ಕೌಂತೇಯನೆ, ಈ ಶರೀರ ಕ್ಷೇತ್ರ ಎನಿಸಿದೆ. ಕ್ಷೇತ್ರವನ್ನು ತಿಳಿದವನನ್ನು ಕ್ಷೇತ್ರಜ್ಞ ಎಂದು ಜ್ಞಾನಿಗಳು ಹೇಳುತ್ತಾರೆ. |
|
3
|
ಕ್ಷೇತ್ರಜ್ಞಂ ಚಾಪಿ ಮಾಂ ವಿದ್ಧಿ ಸರ್ವ-ಕ್ಷೇತ್ರೇಷು ಭಾರತ ।
ಕ್ಷೇತ್ರ-ಕ್ಷೇತ್ರಜ್ಞಯೋರ್ಜ್ಞಾನಂ ಯತ್ ತಜ್ಜ್ಞಾನಂ ಮತಂ ಮಮ ॥ |
|
ಓ ಭಾರತನೆ, ಎಲ್ಲ ಕ್ಷೇತ್ರಗಳಲ್ಲೂ ನನ್ನನ್ನೆ ಕ್ಷೇತ್ರಜ್ಞನೆಂದು ತಿಳಿ. ಕ್ಷೇತ್ರ ಮತ್ತು ಕ್ಷೇತ್ರಜ್ಞರ ತಿಳಿವೇ ಜ್ಞಾನ ಎಂದು ನನ್ನ ಅಭಿಪ್ರಾಯ. |
|
4
|
ತತ್ ಕ್ಷೇತ್ರಂ ಯಚ್ಚ ಯಾದೃಕ್ ಚ ಯದ್ವಿಕಾರಿ ಯತಶ್ಚ ಯತ್ ।
ಸ ಚ ಯೋ ಯತ್ಪ್ರಭಾವಶ್ಚ ತತ್ ಸಮಾಸೇನ ಮೇ ಶೃಣು ॥ |
|
ಆ ಕ್ಷೇತ್ರ ಎಂದರೆ ಏನು? ಎಂಥದು? ಅದರ ವಿಕಾರಗಳು ಏನು? ಅದರ ಪ್ರೇರಕ ಶಕ್ತಿ ಯಾರು? ಕ್ಷೇತ್ರಜ್ಞನು ಎಂಥವನು? ಅವನ ಮಹಿಮೆಗಳೇನು? ಇದನ್ನೆಲ್ಲ ಸಂಕ್ಷೇಪವಾಗಿ ನನ್ನಿಂದ ಕೇಳು. |
|
5
|
ಋಷಿಭಿರ್ಬಹುಧಾ ಗೀತಂ ಛಂದೋಭಿರ್ವಿವಿಧೈಃ ಪೃಥಕ್ ।
ಬ್ರಹ್ಮ-ಸೂತ್ರ-ಪದೈಶ್ಚೈವ ಹೇತು-ಮದ್ಭಿರ್ವಿ-ನಿಶ್ಚಿತೈಃ ॥ |
|
ಈ ವಿಷಯ, ಬೇರೆ ಬೇರೆ ಮಂತ್ರಗಳಿಂದ ಮತ್ತೆ ಯುಕ್ತಿಯಿಂದ ನಿರ್ಣಯಿಸಲ್ಪಟ್ಟ ಬ್ರಹ್ಮಸೂತ್ರದ ಪದಗಳಿಂದ ಬಹಳ ರೀತಿಯಲ್ಲಿ ಋಷಿಗಳಿಂದ ಪ್ರಪ್ರತ್ಯೇಕವಾಗಿ ಹೇಳಲ್ಪಟ್ಟಿದೆ. |
|
6
|
ಮಹಾ-ಭೂತಾನ್ಯಹಂ-ಕಾರೋ ಬುದ್ಧಿರವ್ಯಕ್ತಮೇವ ಚ ।
ಇಂದ್ರಿಯಾಣಿ ದಶೈಕಂ ಚ ಪಂಚ ಚೇಂದ್ರಿಯ-ಗೋಚರಾಃ ॥ |
|
7
|
ಇಚ್ಛಾ ದ್ವೇಷಃ ಸುಖಂ ದುಃಖಂ ಸಂಘಾತಶ್ಚೇತನಾ ಧೃತಿಃ ।
ಏತತ್ ಕ್ಷೇತ್ರಂ ಸಮಾಸೇನ ಸ-ವಿಕಾರಮುದಾಹೃತಮ್ ॥ |
|
ಇವು ಒಟ್ಟು ೨೪ ಕ್ಷೇತ್ರಗಳು (ಜಡ ಮತ್ತು ಜೀವಗಳು) - ಮಣ್ಣು (ಭೂದೇವಿ), ನೀರು (ಬುಧ), ಬೆಂಕಿ (ಪಾವಕ), ಗಾಳಿ (ವಾಯುಸುತ ಮರೀಚಿ), ಆಕಾಶ (ಗಣಪತಿ) ಎಂಬ ಐದು ಭೂತಗಳು. ಅಹಂಕಾರತತ್ವ (ಶಿವ), ಬುದ್ಧಿತತ್ವ (ಜೀವಮಾನಿ ಚತುರ್ಮುಖ), ಅವ್ಯಕ್ತತತ್ವ (ಶ್ರೀದೇವಿ) ಮತ್ತು ಮಹತ್ತತ್ವ (ಬ್ರಹ್ಮಾ). ಹನ್ನೊಂದು ಇಂದ್ರಿಯಗಳು - ಕಿವಿ (ಚಂದ್ರ), ಚರ್ಮ (ವಾಯುಸುತ ಮರುತ್), ಕಣ್ಣು (ಸೂರ್ಯ), ನಾಲಿಗೆ (ವರುಣ), ಮೂಗು (ಅಶ್ವಿಗಳು), ಬಾಯಿ (ಅಗ್ನಿ), ಕೈಗಳು (ಇಂದ್ರ), ಕಾಲುಗಳು (ಇಂದ್ರಪುತ್ರರು - ಜಯಂತ ಮತ್ತು ಶಂಭು), (ಮಲಮೂತ್ರ ವಿಸರ್ಗದ) ಪಾಯು (ಯಮ) ಮತ್ತು ಉಪಸ್ಥ (ದಕ್ಷ), ಮನಸ್ಸು (ಕಾಮ ಮತ್ತು ಅನಿರುದ್ಧ) ಮತ್ತು ಐದು ಜ್ಞಾನೇಂದ್ರಿಯ ವಿಷಯಗಳು - ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳು (ರುದ್ರಪುತ್ರರಾದ ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನರು ಮತ್ತು ಸುಪರ್ಣಿ, ವಾರುಣಿ, ಪಾರ್ವತಿಯರು). ಇವು ಏಳು ವಿಕಾರಗಳು - ಬಯಕೆ (ಭಾರತಿ), ವೈರ (ದ್ವಾಪರ), ಸುಖ (ಮುಖ್ಯಪ್ರಾಣ), ದುಃಖ (ಕಲಿ), ಪೂರ್ತಿ ಶರೀರ (ದೇಹಾಭಿಮಾನಿ ಜೀವ), ಸ್ಮರಣೆ (ಶ್ರೀದೇವಿ), ಧೈರ್ಯ (ಸರಸ್ವತಿ). ಹೀಗೆ ವಿಕಾರಗಳೊಡನೆ ಕ್ಷೇತ್ರವನ್ನು ಸಂಗ್ರಹವಾಗಿ ಹೇಳಿಯಾಯಿತು. |
|
8
|
ಅಮಾನಿತ್ವಮಡಂಭಿತ್ವಂ ಅಹಿಂಸಾ ಕ್ಷಾಂತಿರಾರ್ಜವಮ್ ।
ಆಚಾರ್ಯೋಪಾಸನಂ ಶೌಚಂ ಸ್ಥೈರ್ಯಮಾತ್ಮ-ವಿನಿಗ್ರಹಃ ॥ |
|
ಬಿಂಕ ಬಿಡುವುದು, ಇಲ್ಲದ ದೊಡ್ಡತನ ತೋರಿಸದಿರುವುದು, ಹಿಂಸೆ ಮಾಡದಿರುವುದು, ಸೈರಣೆ, ನೇರ ನಡೆ-ನುಡಿ, ಗುರುಸೇವೆ, ದೇಹ ಮತ್ತು ಮನದ ಶುದ್ಧಿ, ಸ್ಥಿರವಾದ ನಿರ್ಣಯ, ಮನೋನಿಗ್ರಹ. |
|
9
|
ಇಂದ್ರಿಯಾರ್ಥೇಷು ವೈರಾಗ್ಯಂ ಅನಹಂಕಾರ ಏವ ಚ ।
ಜನ್ಮ-ಮೃತ್ಯು-ಜರಾ-ವ್ಯಾಧಿ-ದುಃಖ-ದೋಷಾನು-ದರ್ಶನಮ್ ॥ |
|
ಇಂದ್ರಿಯ ವಿಷಯಗಳಲ್ಲಿ ಅನಾಸಕ್ತಿ, ಅಹಂಕಾರ ಪಡದಿರುವುದು, ಹುಟ್ಟು-ಸಾವು-ಮುಪ್ಪು-ರೋಗ-ನೋವುಗಳೆಂಬ ದೋಷಗಳನ್ನು ನಿತ್ಯ ಗಮನಿಸುವುದು. |
|
10
|
ಅಸಕ್ತಿರನಭಿಷ್ವಂಗಃ ಪುತ್ರ-ದಾರ-ಗೃಹಾದಿಷು ।
ನಿತ್ಯಂ ಚ ಸಮ-ಚಿತ್ತತ್ವಂ ಇಷ್ಟಾನಿಷ್ಟೋಪ-ಪತ್ತಿಷು ॥ |
|
ಅಂಟಿಕೊಳ್ಳದಿರುವುದು, ಮಕ್ಕಳು - ಹೆಂಡತಿ - ಮನೆ ಮುಂತಾದವುಗಳನ್ನು ಅತಿಯಾಗಿ ಹಚ್ಚಿಕೊಳ್ಳದಿರುವುದು, ಇಷ್ಟ-ಅನಿಷ್ಟಗಳು ಉಂಟಾದಾಗ ಯಾವಾಗಲೂ ಮನಸ್ಸು ಏರುಪೇರು ಆಗದಿರುವುದು. |
|
11
|
ಮಯಿ ಚಾನನ್ಯ-ಯೋಗೇನ ಭಕ್ತಿರವ್ಯಭಿ-ಚಾರಿಣೀ ।
ವಿವಿಕ್ತ-ದೇಶ-ಸೇವಿತ್ವಂ ಅರತಿರ್ಜನ-ಸಂಸದಿ ॥ |
|
ಬೇರೆ ದೇವತೆಗಳೆಡೆಗೆ ಸಾಗದ, ಬೇರೆ ಕಾರಣಗಳಿಗೆ ಅಂಟದ ನನ್ನಲ್ಲೆ ನೆಲೆಸಿದ ಭಕ್ತಿ, ಏಕಾಂತ ವಾಸ, ಜನರ ಗುಂಪಿನಲ್ಲಿ ಸೇರದಿರುವುದು |
|
12
|
ಅಧ್ಯಾತ್ಮ-ಜ್ಞಾನ-ನಿತ್ಯತ್ವಂ ತತ್ತ್ವ-ಜ್ಞಾನಾರ್ಥ-ದರ್ಶನಮ್ ।
ಏತಜ್ಜ್ಞಾನಮಿತಿ ಪ್ರೋಕ್ತಂ ಅಜ್ಞಾನಂ ಯದತೋಽನ್ಯಥಾ ॥ |
|
ನಿತ್ಯವೂ ಪರಮಾತ್ಮನ ಜ್ಞಾನವನ್ನು ಬಯಸುವುದು, ಅಪರೋಕ್ಷ ಜ್ಞಾನಕ್ಕಾಗಿ ಶಾಸ್ತ್ರಗಳ ಅಧ್ಯಯನ, ಇವು ಇಪ್ಪತ್ತು ಜ್ಞಾನ ಮತ್ತು ಜ್ಞಾನಸಾಧನಗಳು ಹೇಳಲ್ಪಟ್ಟವು. ಇದಕ್ಕಿಂತ ಬೇರೆಯಾದದ್ದು ಅಜ್ಞಾನ ಮತ್ತು ಅಜ್ಞಾನದ ದಾರಿ. |
|
13
|
ಜ್ಞೇಯಂ ಯತ್ ತತ್ ಪ್ರವಕ್ಷ್ಯಾಮಿ ಯಜ್ಜ್ಞಾತ್ವಾಽಮೃತಮಶ್ನುತೇ ।
ಅನಾದಿ-ಮತ್ ಪರಂ ಬ್ರಹ್ಮ ನ ಸತ್ ತನ್ನಾಸದುಚ್ಯತೇ ॥ |
|
ಯಾವುದನ್ನು ತಿಳಿದಾಗ ಮೋಕ್ಷವನ್ನು ಪಡೆಯುವನೋ ಅಂಥ ಜ್ಞೇಯವನ್ನು ಹೇಳುತ್ತೇನೆ. ಹುಟ್ಟು ಇಲ್ಲದ ಪರಬ್ರಹ್ಮವೆ ಜ್ಞೇಯ. ಅದು ಸತ್ (ಕಣ್ಣಿಗೆ ಕಾಣುವ ಮಣ್ಣು-ನೀರು-ಬೆಂಕಿ) ಅಲ್ಲ. ಅಸತ್ (ಕಾಣದ ಗಾಳಿ ಆಕಾಶ) ಅಲ್ಲ ಎಂದು ಹೇಳಲ್ಪಟ್ಟಿದೆ. |
|
14
|
ಸರ್ವತಃ-ಪಾಣಿ-ಪಾದಂ ತತ್ ಸರ್ವತೋಽಕ್ಷಿ-ಶಿರೋ-ಮುಖಮ್ ।
ಸರ್ವತಃ-ಶ್ರುತಿಮಲ್ಲೋಕೇ ಸರ್ವಮಾವೃತ್ಯ ತಿಷ್ಠತಿ ॥ |
|
ಅದು ಎಲ್ಲೆಡೆಯೂ, ಕೈ-ಕಾಲುಗಳು, ಕಣ್ಣು-ತಲೆ-ಬಾಯಿ-ಕಿವಿಗಳು ಉಳ್ಳದ್ದು. ಪ್ರಪಂಚದಲ್ಲಿ ಎಲ್ಲವನ್ನೂ ಆವರಿಸಿಬಿಟ್ಟಿದೆ. |
|
15
|
ಸರ್ವೇಂದ್ರಿಯ-ಗುಣಾಭಾಸಂ ಸರ್ವೇಂದ್ರಿಯ-ವಿವರ್ಜಿತಮ್ ।
ಅಸಕ್ತಂ ಸರ್ವ-ಭೃಚ್ಚೈವ ನಿರ್ಗುಣಂ ಗುಣ-ಭೋಕ್ತೃ ಚ ॥ |
|
ಅದು ಎಲ್ಲ ಇಂದ್ರಿಯಗಳನ್ನು ಎಲ್ಲ ವಿಷಯಗಳನ್ನು ಬೆಳಗಿಸುತ್ತಿದೆ. ಅದು ಯಾವ ಜಡ ಇಂದ್ರಿಯಗಳೂ ಇಲ್ಲದ್ದು. ಯಾವುದಕ್ಕೂ ಸಂಬಂಧಪಡದೆ ಎಲ್ಲವನ್ನೂ ಹೊತ್ತಿದೆ. ಪ್ರಾಕೃತವಾದ ಸತ್ವ ರಜಸ್ ತಮೋಗುಣಗಳು ಇಲ್ಲದ್ದು ಮತ್ತು ಆನಂದ ಜ್ಞಾನಾದಿ ಅನಂತ ಗುಣಗಳ ಸ್ವರೂಪ. |
|
16
|
ಬಹಿರಂತಶ್ಚ ಭೂತಾನಾಂ ಅಚರಂ ಚರಮೇವ ಚ ।
ಸೂಕ್ಷ್ಮತ್ವಾತ್ ತದವಿಜ್ಞೇಯಂ ದೂರ-ಸ್ಥಂ ಚಾಂತಿಕೇ ಚ ತತ್ ॥ |
|
ಅದು ಜೀವಿಗಳ ಹೊರಗೂ ಇದೆ, ಒಳಗೂ ಇದೆ. ಅದು ಚಲಿಸದು (ವ್ಯಾಪ್ತವಾದ್ದರಿಂದ) ಮತ್ತೆ ಅಣುವಾದ್ದರಿಂದ ಚಲಿಸುತ್ತದೆ. ಅದು ದೂರದಲ್ಲಿದೆ, ಮತ್ತು ಹತ್ತಿರದಲ್ಲೂ ಇದೆ. ಆದ್ದರಿಂದಲೇ ಅದು ಪೂರ್ತಿ ತಿಳಿಯಲು ಆಗದು. |
|
17
|
ಅವಿಭಕ್ತಂ ಚ ಭೂತೇಷು ವಿಭಕ್ತಮಿವ ಚ ಸ್ಥಿತಮ್ ।
ಭೂತ-ಭರ್ತೃ ಚ ತಜ್ಜ್ಞೇಯಂ ಗ್ರಸಿಷ್ಣು ಪ್ರಭವಿಷ್ಣು ಚ ॥ |
|
ಅದು ಎಲ್ಲ ಜೀವಿಗಳಲ್ಲೂ ಒಂದೇ ರೀತಿಯಾಗಿ ಇದೆ, ಆದರೂ ಬೇರೆ ಬೇರೆ ಎನ್ನುವಂತೆಯೂ ಇದೆ. ಅದು ಎಲ್ಲ ಜೀವಿಗಳನ್ನೂ ಪಾಲಿಸುತ್ತದೆ ಮತ್ತು ನುಂಗುತ್ತದೆ. ಹಾಗೆಯೆ ಚೆನ್ನಾಗಿ ಹುಟ್ಟಿಸುತ್ತದೆ ಎಂದು ತಿಳಿಯಬೇಕು. |
|
18
|
ಜ್ಯೋತಿಷಾಮಪಿ ತಜ್ಜ್ಯೋತಿಃ ತಮಸಃ ಪರಮುಚ್ಯತೇ ।
ಜ್ಞಾನಂ ಜ್ಞೇಯಂ ಜ್ಞಾನ-ಗಮ್ಯಂ ಹೃದಿ ಸರ್ವಸ್ಯ ಧಿಷ್ಠಿತಮ್ ॥ |
|
ಕತ್ತಲೆಯ ಆಚೆಗೆ ಇರುವ ಅದು ಬೆಳಕುಗಳಿಗೆ ಬೆಳಕು ಎನಿಸಿದೆ. ಜ್ಞಾನರೂಪ ಅದು ತನ್ನನ್ನು ತಾನೆ ತಿಳಿಯುವಂಥದು. ಜ್ಞಾನದಿಂದಲೆ ಪಡೆಯಬಹುದಾದುದು. ಎಲ್ಲರ ಹೃದಯದಲ್ಲಿ ಇರುವುದು. |
|
19
|
ಇತಿ ಕ್ಷೇತ್ರಂ ತಥಾ ಜ್ಞಾನಂ ಜ್ಞೇಯಂ ಚೋಕ್ತಂ ಸಮಾಸತಃ ।
ಮದ್ಭಕ್ತ ಏತದ್ ವಿಜ್ಞಾಯ ಮದ್ಭಾವಾಯೋಪ-ಪದ್ಯತೇ ॥ |
|
ಹೀಗೆ ಕ್ಷೇತ್ರ, ಜ್ಞಾನ ಮತ್ತು ಜ್ಞೇಯಗಳನ್ನು ಸಂಕ್ಷೇಪವಾಗಿ ಹೇಳಿ ಆಯಿತು. ನನ್ನ ಭಕ್ತನು ಇದನ್ನು ತಿಳಿದು ನನ್ನ ಸೇವೆಗೆ ಯೋಗ್ಯನಾಗುತ್ತಾನೆ. |
|
20
|
ಪ್ರಕೃತಿಂ ಪುರುಷಂ ಚೈವ ವಿದ್ಧ್ಯನಾದೀ ಉಭಾವಪಿ ।
ವಿಕಾರಾಂಶ್ಚ ಗುಣಾಂಶ್ಚೈವ ವಿದ್ಧಿ ಪ್ರಕೃತಿ-ಸಂಭವಾನ್ ॥ |
|
ಪ್ರಕೃತಿ (ಜಡ ಮತ್ತು ಚೇತನ) ಮತ್ತು ಪುರುಷ (ಜೀವ ಮತ್ತು ದೇವ) ಇಬ್ಬರೂ ಹುಟ್ಟು ಇಲ್ಲದವರು ಎಂದು ತಿಳಿ. ಸ್ಥೂಲರೂಪಗಳು ಮತ್ತು ತ್ರಿಗುಣಗಳು ಪ್ರಕೃತಿಯ ಕಾರ್ಯಗಳು ಎಂದು ತಿಳಿ. |
|
21
|
ಕಾರ್ಯ-ಕಾರಣ-ಕರ್ತೃತ್ವೇ ಹೇತುಃ ಪ್ರಕೃತಿರುಚ್ಯತೇ ।
ಪುರುಷಃ ಸುಖ-ದುಃಖಾನಾಂ ಭೋಕ್ತೃತ್ವೇ ಹೇತುರುಚ್ಯತೇ ॥ |
|
ದೇಹ ಮತ್ತು ಇಂದ್ರಿಯಗಳ ನಿರ್ಮಾಣದಲ್ಲಿ ಜಡಪ್ರಕೃತಿ (ಚಿತ್ಪ್ರಕೃತಿ ಲಕ್ಷ್ಮಿಯು ಮುಖ್ಯ) ಕಾರಣ ಎನಿಸಿದೆ. ಸುಖ-ದುಃಖಗಳ ಅನುಭವದಲ್ಲಿ ಜೀವ (ದೇವನು ಮುಖ್ಯ) ಕಾರಣ ಎನಿಸಿದ್ದಾನೆ. |
|
22
|
ಪುರುಷಃ ಪ್ರಕೃತಿ-ಸ್ಥೋ ಹಿ ಭುಂಕ್ತೇ ಪ್ರಕೃತಿ-ಜಾನ್ ಗುಣಾನ್ ।
ಕಾರಣಂ ಗುಣ-ಸಂಗೋಽಸ್ಯ ಸದಸದ್ಯೋನಿ-ಜನ್ಮಸು ॥ |
|
ಪ್ರಕೃತಿಯ ಬಂಧನದಲ್ಲಿರುವ ಜೀವನು ಪ್ರಕೃತಿ ಕಾರ್ಯಗಳಾದ ಸುಖ-ದುಃಖಾದಿಗಳನ್ನು ಅನುಭವಿಸುತ್ತಾನೆ. ಒಳ್ಳೆಯ, ಕೆಟ್ಟ ಮತ್ತು ಮಿಶ್ರ (ನರ-ಮೃಗ-ತರು ಮುಂತಾದ) ಜಾತಿಗಳಲ್ಲಿ ಹುಟ್ಟಿ ಬರಲು ಜೀವನಿಗೆ ಕಾರಣವು ಸತ್ವ ರಜಸ್ ತಮಸುಗಳ ಸಂಬಂಧ. |
|
23
|
ಉಪ-ದ್ರಷ್ಟಾಽನು-ಮಂತಾ ಚ ಭರ್ತಾ ಭೋಕ್ತಾ ಮಹೇಶ್ವರಃ ।
ಪರಮಾತ್ಮೇತಿ ಚಾಪ್ಯುಕ್ತೋ ದೇಹೇಽಸ್ಮಿನ್ ಪುರುಷಃ ಪರಃ ॥ |
|
ಎಲ್ಲಕ್ಕಿಂತ ಮೇಲೆ ಇದ್ದು ಎಲ್ಲವನ್ನೂ ಹತ್ತಿರದಲ್ಲಿ ನೋಡುವವನು, ತನ್ನ ಇಚ್ಛೆಯಂತೆ ಪ್ರತಿಯೊಂದನ್ನೂ ನಿರೂಪಿಸುವವನು, ಎಲ್ಲವನ್ನೂ ಹೊತ್ತವನು, ಸಾರವನ್ನಷ್ಟೆ ಸ್ವೀಕರಿಸುವವನು, ದೊಡ್ಡ ಒಡೆಯರಿಗೂ ಸ್ವಾಮಿಯಾದವನು ಪರಮಾತ್ಮನೆಂದು ಶಾಸ್ತ್ರಗಳಲ್ಲಿ ಪ್ರಸಿದ್ಧನು. ಅವನೇ ಈ ದೇಹದಲ್ಲಿ ಜೀವನಿಗಿಂತ ಬೇರೆಯಾಗಿ ಇದ್ದಾನೆ, ಮಿಗಿಲಾಗಿದ್ದಾನೆ, ಪುರುಷೋತ್ತಮನು ಎನಿಸಿದ್ದಾನೆ. |
|
24
|
ಯ ಏವಂ ವೇತ್ತಿ ಪುರುಷಂ ಪ್ರಕೃತಿಂ ಚ ಗುಣೈಃ ಸಹ ।
ಸರ್ವಥಾ ವರ್ತ-ಮಾನೋಽಪಿ ನ ಸ ಭೂಯೋಽಭಿ-ಜಾಯತೇ ॥ |
|
ಹೀಗೆ ಪ್ರಕೃತಿ ಮತ್ತು ಪುರುಷರನ್ನು ಗುಣಗಳ ಜೊತೆಗೆ ತಿಳಿದವನು, ಯಾವ ರೀತಿಯಲ್ಲಿ ಬದುಕಿದರೂ ಮತ್ತೆ ಹುಟ್ಟುವುದಿಲ್ಲ. |
|
25
|
ಧ್ಯಾನೇನಾಽತ್ಮನಿ ಪಶ್ಯಂತಿ ಕೇಚಿದಾತ್ಮಾನಮಾತ್ಮನಾ ।
ಅನ್ಯೇ ಸಾಂಖ್ಯೇನ ಯೋಗೇನ ಕರ್ಮ-ಯೋಗೇನ ಚಾಪರೇ ॥ |
|
ಕೆಲವರು ಧ್ಯಾನದ ಮೂಲಕ ಪರಮಾತ್ಮನನ್ನು ತನ್ನಲ್ಲಿಯೇ ಒಳಮನಸ್ಸಿನಿಂದ ಕಾಣುತ್ತಾರೆ. ಇತರರು ಶಾಸ್ತ್ರಜ್ಞಾನದ ಮೂಲಕ ದೇವನನ್ನು ಕಾಣುತ್ತಾರೆ. ಹಲವರು ಕರ್ಮಯೋಗದಿಂದ ಭಗವಂತನನ್ನು ಕಾಣುತ್ತಾರೆ. |
|
26
|
ಅನ್ಯೇ ತ್ವೇವಮಜಾನಂತಃ ಶ್ರುತ್ವಾಽನ್ಯೇಭ್ಯ ಉಪಾಸತೇ ।
ತೇಽಪಿ ಚಾತಿ-ತರಂತ್ಯೇವ ಮೃತ್ಯುಂ ಶ್ರುತಿ-ಪರಾಯಣಾಃ ॥ |
|
ಹೀಗೆ ದೇವರನ್ನು ತಿಳಿಯಲಾಗದ ಇನ್ನು ಕೆಲವರು ತಿಳಿದವರಿಂದ ಕೇಳಿ ಉಪಾಸನೆ ಮಾಡುತ್ತಾರೆ. ಶಾಸ್ತ್ರಶ್ರವಣವನ್ನೆ ಮುಖ್ಯವಾಗಿ ಆಶ್ರಯಿಸಿಕೊಂಡ ಅವರೂ ಮರಣರೂಪ ಸಂಸಾರವನ್ನು ಪೂರ್ತಿ ದಾಟುತ್ತಾರೆ. |
|
27
|
ಯಾವತ್ ಸಂಜಾಯತೇ ಕಿಂಚಿತ್ ಸತ್ವಂ ಸ್ಥಾವರ-ಜಂಗಮಮ್ ।
ಕ್ಷೇತ್ರ-ಕ್ಷೇತ್ರಜ್ಞ-ಸಂಯೋಗಾತ್ ತದ್ ವಿದ್ಧಿ ಭರತರ್ಷಭ ॥ |
|
ಓ ಭರತಶ್ರೇಷ್ಠನೆ, ನಡೆದಾಡದ (ಮರ) ಮತ್ತು ಚಲಿಸುವ ಒಂದೊಂದೂ ಜೀವವೂ ಕ್ಷೇತ್ರ (ಲಕ್ಷ್ಮೀ) ಮತ್ತು ಕ್ಷೇತ್ರಜ್ಞ (ನಾರಾಯಣ)ರ ಸಂಬಂಧದಿಂದಲೆ ಮುಖ್ಯವಾಗಿ ಹುಟ್ಟಿಬಂದಿರುವುದು ಎಂದು ತಿಳಿ. |
|
28
|
ಸಮಂ ಸರ್ವೇಷು ಭೂತೇಷು ತಿಷ್ಠಂತಂ ಪರಮೇಶ್ವರಮ್ ।
ವಿನಶ್ಯತ್ಸ್ವವಿ-ನಶ್ಯಂತಂ ಯಃ ಪಶ್ಯತಿ ಸ ಪಶ್ಯತಿ ॥ |
|
ಸರ್ವೋತ್ತಮದೇವನು ಎಲ್ಲದರಲ್ಲೂ ಸಮನಾಗಿ ಇರುವನು, ಎಲ್ಲವೂ ನಾಶ ಹೊಂದಿದರೂ ನಾಶವಾಗದೆ ಹಾಗೆಯೇ ಇರುವನು. ಆ ದೇವನನ್ನು ಹೀಗೆ ತಿಳಿದವನೆ ನಿಜವಾಗಿ ತಿಳಿದವನು. |
|
29
|
ಸಮಂ ಪಶ್ಯನ್ ಹಿ ಸರ್ವತ್ರ ಸಮವ-ಸ್ಥಿತಮೀಶ್ವರಮ್ ।
ನ ಹಿನಸ್ತ್ಯಾತ್ಮನಾಽಽತ್ಮಾನಂ ತತೋ ಯಾತಿ ಪರಾಂ ಗತಿಮ್ ॥ |
|
ಎಲ್ಲೆಡೆಯೂ ಒಂದೇ ರೀತಿಯಾಗಿ ಇದ್ದಾನೆ ಎಂದು ಒಡೆಯನಾದ ದೇವನನ್ನು ತಿಳಿದವನು, ತನ್ನನ್ನು ತಾನೇ ಹಿಂಸಿಸುವುದಿಲ್ಲ. ಇದರಿಂದ ಉತ್ತಮ ಗತಿಯನ್ನು ಪಡೆಯುತ್ತಾನೆ. |
|
30
|
ಪ್ರಕೃತ್ಯೈವ ಚ ಕರ್ಮಾಣಿ ಕ್ರಿಯಮಾಣಾನಿ ಸರ್ವಶಃ ।
ಯಃ ಪಶ್ಯತಿ ತಥಾಽಽತ್ಮಾನಂ ಅಕರ್ತಾರಂ ಸ ಪಶ್ಯತಿ ॥ |
|
ಮಾಡಬೇಕಾದ ಎಲ್ಲ ಕಾರ್ಯಗಳೂ ಪ್ರಕೃತಿಯಿಂದಲೆ ನಡೆಯುತ್ತಿವೆ ಎಂದು ತಿಳಿದವನು ಮತ್ತು ಏನು ಮಾಡುವುದಕ್ಕೂ ತಾನು ಸ್ವತಂತ್ರನು ಅಲ್ಲ ಎಂದು ತಿಳಿದವನು ನಿಜವಾಗಿ ತಿಳಿದವನು. |
|
31
|
ಯದಾ ಭೂತ-ಪೃಥಗ್ಭಾವಂ ಏಕ-ಸ್ಥಮನು-ಪಶ್ಯತಿ ।
ತತ ಏವ ಚ ವಿಸ್ತಾರಂ ಬ್ರಹ್ಮ ಸಂಪದ್ಯತೇ ತದಾ ॥ |
|
ಪ್ರತಿಯೊಂದೂ ಬೇರೆ ಬೇರೆಯಾದ ಜೀವರಾಶಿಯನ್ನು ಒಬ್ಬ ದೇವನಲ್ಲಿ ನೆಲೆಸಿದೆ ಎಂದು ಮತ್ತು ಅವನಿಂದಲೆ ಸೃಷ್ಟಿಯ ಬಿತ್ತರವು ಎಂದು ತಿಳಿದಾಗ ದೇವನನ್ನು ಪಡೆಯುತ್ತಾನೆ. |
|
32
|
ಅನಾದಿ-ತ್ವಾನ್ನಿರ್ಗುಣ-ತ್ವಾತ್ ಪರಮಾತ್ಮಾಽಯಮವ್ಯಯಃ ।
ಶರೀರ-ಸ್ಥೋಽಪಿ ಕೌಂತೇಯ ನ ಕರೋತಿ ನ ಲಿಪ್ಯತೇ ॥ |
|
ಓ ಕೌಂತೇಯನೆ, ಪರಮಾತ್ಮನು ಹುಟ್ಟು ಇಲ್ಲದವನು, ಸತ್ವ ರಜಸ್ ತಮಸ್ ಗುಣಗಳು ಇಲ್ಲದವನು. ಆದ್ದರಿಂದ ಇವನು ನಾಶವಾಗದವನು. ಎಲ್ಲರ ದೇಹದೊಳಗಿದ್ದರೂ ಏನನ್ನೂ ಮಾಡುವುದಿಲ್ಲ, ಏನನ್ನೂ ಅಂಟಿಸಿಕೊಳ್ಳುವುದಿಲ್ಲ. |
|
33
|
ಯಥಾ ಸರ್ವ-ಗತಂ ಸೌಕ್ಷ್ಯಾತ್ ಆಕಾಶಂ ನೋಪ-ಲಿಪ್ಯತೇ ।
ಸರ್ವತ್ರಾವ-ಸ್ಥಿತೋ ದೇಹೇ ತಥಾಽಽತ್ಮಾ ನೋಪ-ಲಿಪ್ಯತೇ ॥ |
|
ಆಕಾಶವು ಎಲ್ಲೆಡೆ ಇದ್ದರೂ ಯಾವುದಕ್ಕೂ ತಡೆಯಾಗದ ಸೂಕ್ಷ್ಮಧರ್ಮದಿಂದಾಗಿ ಯಾವುದರಿಂದಲೂ ಅಂಟಿಸಿಕೊಳ್ಳುವುದಿಲ್ಲ. ಹಾಗೆ ಪರಮಾತ್ಮನು ಎಲ್ಲ ದೇಹಗಳಲ್ಲಿ ತುಂಬಿದ್ದರೂ ಸೂಕ್ಷ್ಮನಾದುದರಿಂದ ಅಂಟಿಸಿಕೊಳ್ಳುವುದಿಲ್ಲ. |
|
34
|
ಯಥಾ ಪ್ರಕಾಶಯತ್ಯೇಕಃ ಕೃತ್ಸ್ನಂ ಲೋಕಮಿಮಂ ರವಿಃ ।
ಕ್ಷೇತ್ರಂ ಕ್ಷೇತ್ರೀ ತಥಾ ಕೃತ್ಸ್ನಂ ಪ್ರಕಾಶಯತಿ ಭಾರತ ॥ |
|
ಓ ಭಾರತನೆ, ಒಬ್ಬನೆ ಸೂರ್ಯನು ಈ ಭೂಲೋಕವನ್ನೆಲ್ಲ ಬೆಳಗುವಂತೆ, ಎಲ್ಲ ಕ್ಷೇತ್ರಗಳಲ್ಲಿ ನೆಲೆನಿಂತ ಕ್ಷೇತ್ರಜ್ಞನೆನಿಸಿದ ಒಬ್ಬನೆ ದೇವನು ಇಡಿಯ ಪ್ರಪಂಚವೆಂಬ ಕ್ಷೇತ್ರವನ್ನು (ಕ್ಷೇತ್ರಗಳ ರಾಶಿಯನ್ನು) ಬೆಳಗಿಸುತ್ತಾನೆ. |
|
35
|
ಕ್ಷೇತ್ರ-ಕ್ಷೇತ್ರಜ್ಞಯೋರೇವಂ ಅಂತರಂ ಜ್ಞಾನ-ಚಕ್ಷುಷಾ ।
ಭೂತ-ಪ್ರಕೃತಿ-ಮೋಕ್ಷಂ ಚ ಯೇ ವಿದುರ್ಯಾಂತಿ ತೇ ಪರಮ್ ॥ |
|
ಕ್ಷೇತ್ರ ಮತ್ತು ಕ್ಷೇತ್ರಜ್ಞ ಇವೆರಡರ ಭೇದವನ್ನು ಮತ್ತು ಪಂಚಭೂತಗಳಿಂದ ಹಾಗೂ ಪ್ರಕೃತಿಯಿಂದ ಬಿಡುಗಡೆ ಪಡೆವ ಕ್ರಮವನ್ನು ತಿಳಿಯಾದ ಅರಿವಿನಿಂದ ತಿಳಿದವರು ಪರಮಾತ್ಮನನ್ನು ಸೇರುತ್ತಾರೆ. |