|
ಅರ್ಜುನ
ಉವಾಚ
|
|
1
|
ಜ್ಯಾಯಸೀ ಚೇತ್ ಕರ್ಮಣಸ್ತೇ ಮತಾ ಬುದ್ಧಿರ್ಜನಾರ್ದನ ।
ತತ್ ಕಿಂ ಕರ್ಮಣಿ ಘೋರೇ ಮಾಂ ನಿ-ಯೋಜಯಸಿ ಕೇಶವ ॥ |
|
ಅರ್ಜುನನು ಪ್ರಶ್ನಿಸುತ್ತಾನೆ - ಓ ಜನಾರ್ದನನೇ, ಕರ್ಮಕ್ಕಿಂತ ಜ್ಞಾನವೇ ಶ್ರೇಷ್ಠ ಎಂದು ನಿನಗೆ ಸಮ್ಮತವಾದರೆ, ಓ ಕೇಶವ, ಮತ್ತೇಕೆ ನನ್ನನ್ನು ಈ ಘೋರವಾದ ಯುದ್ಧಕರ್ಮದಲ್ಲಿ ತೊಡಗಿಸುತ್ತಿರುವೆ? |
|
2
|
ವ್ಯಾಮಿಶ್ರೇಣೈವ ವಾಕ್ಯೇನ ಬುದ್ಧಿಂ ಮೋಹಯಸೀವ ಮೇ ।
ತದೇಕಂ ವದ ನಿಶ್ಚಿತ್ಯ ಯೇನ ಶ್ರೇಯೋಽಹಮಾಪ್ನುಯಾಮ್ ॥ |
|
ನನ್ನ ಬುದ್ಧಿಯನ್ನು ದ್ವಂದ್ವಾರ್ಥದ ಮಾತಿನಿಂದ ಮೋಹಗೊಳಿಸುವಂತಿರುವೆ. ಯಾವುದರಿಂದ ನಾನು ಒಳಿತನ್ನು ಪಡೆವೆನು ಅದನ್ನೊಂದನ್ನು ನಿರ್ಧರಿಸಿ ಹೇಳು. |
|
ಭಗವಾನ್
ಉವಾಚ
|
|
3
|
ಲೋಕೇಽಸ್ಮಿನ್ ದ್ವಿವಿಧಾ ನಿಷ್ಠಾ ಪುರಾ ಪ್ರೋಕ್ತಾ ಮಯಾಽನಘ ।
ಜ್ಞಾನ-ಯೋಗೇನ ಸಾಂಖ್ಯಾನಾಂ ಕರ್ಮ-ಯೋಗೇನ ಯೋಗಿನಾಮ್ |
|
ಕೃಷ್ಣನು ಉತ್ತರಿಸುತ್ತಾನೆ - ಓ ಪಾಪದೂರನೆ, ಜ್ಞಾನಮಾರ್ಗಿಗಳಿಗೆ ಜ್ಞಾನಪ್ರಧಾನವಾದ ಸಾಧನೆ ಮತ್ತು ಕರ್ಮಯೋಗಿಗಳಿಗೆ ಕರ್ಮಪ್ರಧಾನವಾದ ಸಾಧನೆ, ಹೀಗೆ ಲೋಕದ ಜನರಲ್ಲಿ ಎರಡು ರೀತಿಯ ಸಾಧನೆಯನ್ನು ನಾನು ಹಿಂದೆ ಹೇಳಿದೆ. |
|
4
|
ನ ಕರ್ಮಣಾಮನಾರಂಭಾತ್ ನೈಷ್ಕರ್ಮ್ಯಂ ಪುರುಷೋಽಶ್ನುತೇ ।
ನ ಚ ಸಂ-ನ್ಯಸನಾದೇವ ಸಿದ್ಧಿಂ ಸಮಧಿ-ಗಚ್ಛತಿ ॥ |
|
ಸಾಧಕನು ಕರ್ಮಗಳನ್ನು ಮಾಡದೆಯೇ ಕರ್ಮಬಂಧದಿಂದ ಕಳಚನು. ಕರ್ಮದ ಫಲವನ್ನು ತ್ಯಾಗ ಮಾಡಿದ್ದರಿಂದಲೇ ಸಿದ್ಧಿಯನ್ನು ಪಡೆಯುವುದೂ ಇಲ್ಲ. |
|
5
|
ನ ಹಿ ಕಶ್ಚಿತ್ ಕ್ಷಣಮಪಿ ಜಾತು ತಿಷ್ಠತ್ಯಕರ್ಮ-ಕೃತ್ ।
ಕಾರ್ಯತೇ ಹ್ಯವಶಃ ಕರ್ಮ ಸರ್ವಃ ಪ್ರಕೃತಿ-ಜೈರ್ಗುಣೈಃ ॥ |
|
ಯಾವನೊಬ್ಬನೂ ಒಂದು ಕ್ಷಣವಾದರೂ ಎಂದೂ ಏನೂ ಮಾಡದೆ ಇರಲಾರನು. ಪ್ರತಿಯೊಬ್ಬನೂ ದೇವರ ಅಧೀನನಾಗಿ ತನ್ನತನದ ಗುಣಗಳಿಂದ ಕರ್ಮ ಮಾಡುತ್ತಲೇ ಇರುವನು. |
|
6
|
ಕರ್ಮೇಂದ್ರಿಯಾಣಿ ಸಂಯಮ್ಯ ಯ ಆಸ್ತೇ ಮನಸಾ ಚರನ್ ।
ಇಂದ್ರಿಯಾರ್ಥಾನ್ ವಿಮೂಢಾತ್ಮಾ ಮಿಥ್ಯಾಚಾರಃ ಸ ಉಚ್ಯತೇ ॥ |
|
ವಾಕ್ ಪಾಣಿ ಪಾದ ಪಾಯು ಉಪಸ್ಥಗಳೆಂಬ ಐದು ಕರ್ಮೇಂದ್ರಿಯಗಳನ್ನು ಅದುಮಿಟ್ಟು, ಆಯಾ ಇಂದ್ರಿಯಗಳ ವಿಷಯಗಳನ್ನು ಮನಸ್ಸಿನಲ್ಲಿಯೇ ಮೆಲುಕು ಹಾಕುತ್ತಿರುವವನು ಬುದ್ಧಿ ಹಾಳಾದವನಿರುತ್ತಾನೆ, ಡಂಭಾಚಾರಿ ಎನಿಸುತ್ತಾನೆ. |
|
7
|
ಯಸ್ತ್ವಿಂದ್ರಿಯಾಣಿ ಮನಸಾ ನಿಯಮ್ಯಾರಭತೇಽರ್ಜುನ ।
ಕರ್ಮೇಂದ್ರಿಯೈಃ ಕರ್ಮ-ಯೋಗಂ ಅಸಕ್ತಃ ಸ ವಿಶಿಷ್ಯತೇ ॥ |
|
ಓ ಅರ್ಜುನ, ಇಂದ್ರಿಯಗಳನ್ನು ಮನಸ್ಸಿನಿಂದ ನಿಗ್ರಹಿಸಿ, ಕರ್ಮದ ಫಲದಲ್ಲೆ ಆಸಕ್ತನಾಗದೆ, ಕರ್ಮೇಂದ್ರಿಯಗಳಿಂದ ಕೆಲಸವನ್ನು ನಡೆಸುವವನು ಹೆಚ್ಚಿನವನು. |
|
8
|
ನಿಯತಂ ಕುರು ಕರ್ಮ ತ್ವಂ ಕರ್ಮ ಜ್ಯಾಯೋ ಹ್ಯಕರ್ಮಣಃ ।
ಶರೀರ-ಯಾತ್ರಾಪಿ ಚ ತೇ ನ ಪ್ರಸಿದ್ಧ್ಯೇದಕರ್ಮಣಃ ॥ |
|
ನಿನಗೆ ಹೇಳಿದ ಕರ್ಮವನ್ನು ನೀನು ಮಾಡು. ಸುಮ್ಮನಿರುವುದಕ್ಕಿಂತ ಕರ್ಮ ಮಾಡುವುದು ಶ್ರೇಷ್ಠ. ಏನೂ ಮಾಡದೇ ಇದ್ದರೆ, ನಿನ್ನ ದೇಹದ ಯಾವುದೊಂದು ಚೇಷ್ಟೆಯೂ ಮುಂದುವರಿಯದು! |
|
9
|
ಯಜ್ಞಾರ್ಥಾತ್ ಕರ್ಮಣೋಽನ್ಯತ್ರ ಲೋಕೋಽಯಂ ಕರ್ಮ-ಬಂಧನಃ ।
ತದರ್ಥಂ ಕರ್ಮ ಕೌಂತೇಯ ಮುಕ್ತ-ಸಂಗಃ ಸಮಾಚರ ॥ |
|
ಓ ಕೌಂತೇಯನೆ, ದೇವರ ಪೂಜೆ ಎಂದಲ್ಲದೆ ಮಾಡಿದ ಕರ್ಮಮಾತ್ರವೆ ಎಲ್ಲರಿಗೂ ಬಂಧನ. ಫಲದ ಆಸೆ ಬಿಟ್ಟು ದೇವರ ಪೂಜೆಯೆಂದು ಕರ್ಮವನ್ನು ಮಾಡು. |
|
10
|
ಸಹ-ಯಜ್ಞಾಃ ಪ್ರಜಾಃ ಸೃಷ್ಟ್ವಾ ಪುರೋವಾಚ ಪ್ರಜಾ-ಪತಿಃ ।
ಅನೇನ ಪ್ರ-ಸವಿಷ್ಯಧ್ವಂ ಏಷ ವೋಽಸ್ತ್ವಿಷ್ಟ-ಕಾಮ-ಧುಕ್ ॥ |
|
ದೇವರ ಪೂಜಾರೂಪವಾದ ಕರ್ಮದೊಡನೆ ಜನರನ್ನು ಹಿಂದೆ ಚತುರ್ಮುಖ ಬ್ರಹ್ಮನು ಸೃಷ್ಟಿಸಿ ಹೀಗೆ ಹೇಳಿದ್ದನು - ಈ ಬಗೆಯಿಂದ ಕರ್ಮವನ್ನು ನಡೆಸಿರಿ. ಇದು ನಿಮಗೆ ಒಳ್ಳೆಯ ಬಯಕೆಯನ್ನು ಕೊಡುವುದಾಗಲಿ. |
|
11
|
ದೇವಾನ್ ಭಾವಯತಾನೇನ ತೇ ದೇವಾ ಭಾವಯಂತು ವಃ ।
ಪರಸ್ಪರಂ ಭಾವಯಂತಃ ಶ್ರೇಯಃ ಪರಮವಾಪ್ಸ್ಯಥ ॥ |
|
ಈ ಯಜ್ಞಕರ್ಮದಿಂದ ದೇವತೆಗಳನ್ನು ಸಂಪರ್ಕಿಸಿರಿ. ಆ ದೇವತೆಗಳು ನಿಮ್ಮನ್ನು ಸಂಪರ್ಕಿಸಲಿ. ಒಬ್ಬರಿಗೊಬ್ಬರು ಸಂಬಂಧಿಸುತ್ತ ಹೆಚ್ಚಿನ ಒಳ್ಳೆಯದನ್ನು ಪಡೆಯಿರಿ. |
|
12
|
ಇಷ್ಟಾನ್ ಭೋಗಾನ್ ಹಿ ವೋ ದೇವಾಃ ದಾಸ್ಯಂತೇ ಯಜ್ಞ-ಭಾವಿತಾಃ ।
ತೈರ್ದತ್ತಾನಪ್ರದಾಯೈಭ್ಯೋ ಯೋ ಭುಂಕ್ತೇ ಸ್ತೇನ ಏವ ಸಃ ॥ |
|
ಯಜ್ಞದಿಂದ ಆರಾಧ್ಯರಾದ ದೇವತೆಗಳು ನೀವು ಬಯಸಿದಂತೆ ಬಗೆಗಳನ್ನು ನೀಡುತ್ತಾರೆ. ಅವರು ನೀಡಿದ್ದನ್ನು ಮತ್ತವರಿಗೆ ಸಮರ್ಪಿಸದೆ ಯಾರು ತಿನ್ನುವನೋ ಅವನು ಕಳ್ಳನೆಂದೇ ಅರ್ಥ. |
|
13
|
ಯಜ್ಞ-ಶಿಷ್ಟಾಶಿನಃ ಸಂತೋ ಮುಚ್ಯಂತೇ ಸರ್ವ-ಕಿಲ್ಬಿಷೈಃ ।
ಭುಂಜತೇ ತೇ ತ್ವಘಂ ಪಾಪಾಃ ಯೇ ಪಚಂತ್ಯಾತ್ಮ-ಕಾರಣಾತ್ ॥ |
|
ಯಜ್ಞಗಳನ್ನು ನಡೆಸಿ ಶೇಷಪ್ರಸಾದವನ್ನು ತಿನ್ನುವವರು ಒಳ್ಳೆಯವರು, ಎಲ್ಲ ಪಾಪಗಳಿಂದ ಪಾರಾಗುವರು. ತಮಗಾಗಿ ಅಡುಗೆ ಮಾಡುವವರು ಕೆಟ್ಟವರು, ಪಾಪವನ್ನೇ ಉಣ್ಣುತ್ತಾರೆ. |
|
14
|
ಅನ್ನಾದ್ ಭವಂತಿ ಭೂತಾನಿ ಪರ್ಜನ್ಯಾದನ್ನ-ಸಂಭವಃ ।
ಯಜ್ಞಾದ್ ಭವತಿ ಪರ್ಜನ್ಯೋ ಯಜ್ಞಃ ಕರ್ಮ-ಸಮುದ್ಭವಃ ॥ |
|
ಆಹಾರದಿಂದ ಜೀವಿಗಳು ಬದುಕಿರುತ್ತವೆ, ಆಹಾರವು ಮೋಡದಿಂದ ಬೆಳೆಯಲಿದೆ. ಯಜ್ಞದಿಂದ ಮೋಡದ ಉತ್ಪತ್ತಿ. ಯಜ್ಞವು ಕರ್ಮದಿಂದಲೇ ಆಗಲಿದೆ. |
|
15
|
ಕರ್ಮ ಬ್ರಹ್ಮೋದ್ಭವಂ ವಿದ್ಧಿ ಬ್ರಹ್ಮಾಕ್ಷರ-ಸಮುದ್ಭವಮ್ ॥
ತಸ್ಮಾತ್ ಸರ್ವ-ಗತಂ ಬ್ರಹ್ಮ ನಿತ್ಯಂ ಯಜ್ಞೇ ಪ್ರ-ತಿಷ್ಠಿತಮ್ ॥ |
|
ಕರ್ಮವು ದೇವರಿಂದ ಆಗುವುದೆಂದು ತಿಳಿ. ದೇವರನ್ನು ವೇದದಿಂದ ತಿಳಿಯಬೇಕು. ಹೀಗೆ ಎಲ್ಲೆಡೆಯ ದೇವರು ಯಜ್ಞದಲ್ಲಿ ನಿತ್ಯ ಇರುವನು. |
|
16
|
ಏವಂ ಪ್ರ-ವರ್ತಿತಂ ಚಕ್ರಂ ನಾನು-ವರ್ತಯತೀಹ ಯಃ ।
ಅಘಾಯುರಿಂದ್ರಿಯಾರಾಮೋ ಮೋಘಂ ಪಾರ್ಥ ಸ ಜೀವತಿ ॥ |
|
ಓ ಪಾರ್ಥ, ಹೀಗೆ ಸುತ್ತುತ್ತಿರುವ ವಿಶ್ವಚಕ್ರವನ್ನು ಮುಂದುವರಿಸದವನು ಇಲ್ಲಿ ಪಾಪಿಯಾಗಿದ್ದಾನೆ. ಇಂದ್ರಿಯಸುಖದಲ್ಲೆ ಮುಳುಗಿದವನ ಬದುಕು ವ್ಯರ್ಥವಾಗಿದೆ. |
|
17
|
ಯಸ್ತ್ವಾತ್ಮ-ರತಿರೇವ ಸ್ಯಾತ್ ಆತ್ಮ-ತೃಪ್ತಶ್ಚ ಮಾನವಃ ।
ಆತ್ಮನ್ಯೇವ ಚ ಸಂತುಷ್ಟಃ ತಸ್ಯ ಕಾರ್ಯಂ ನ ವಿದ್ಯತೇ ॥ |
|
ಪರಮಾತ್ಮನ ಭಕ್ತನಾಗಿ, ಆತ ನೀಡಿದ್ದರಲ್ಲಿಯೆ ತೃಪ್ತನಾಗಿ, ಪರಮಾತ್ಮನ ಚಿಂತನೆಯಲ್ಲಿಯೆ ಆನಂದ ಪಡೆವವಗೆ ಮಾಡಬೇಕಾದ್ದೇನೂ ಇರದು. |
|
18
|
ನೈವ ತಸ್ಯ ಕೃತೇನಾರ್ಥೋ ನಾಕೃತೇನೇಹ ಕಶ್ಚನ ।
ನಚಾಸ್ಯ ಸರ್ವ-ಭೂತೇಷು ಕಶ್ಚಿದರ್ಥ-ವ್ಯಪಾಶ್ರಯಃ ॥ |
|
ಅಂಥವನು ಇಲ್ಲಿ ಕರ್ಮ ಮಾಡಿದರೂ ಮಾಡದಿದ್ದರೂ ಏನೂ ಪ್ರಯೋಜನವಿಲ್ಲ. ಎಲ್ಲ ಜೀವಿಗಳಲ್ಲಿ ಅವನಿಗೆ ಯಾವುದೇ ರೀತಿಯ ವಿಶೇಷ ವ್ಯವಹಾರ ಇಲ್ಲ. |
|
19
|
ತಸ್ಮಾದಸಕ್ತಃ ಸತತಂ ಕಾರ್ಯಂ ಕರ್ಮ ಸಮಾಚರ ।
ಅಸಕ್ತೋ ಹ್ಯಾಚರನ್ ಕರ್ಮ ಪರಮಾಪ್ನೋತಿ ಪೂರುಷಃ ॥ |
|
ಆದ್ದರಿಂದ ಫಲದ ಆಸೆ ಬಿಟ್ಟು, ಯಾವಾಗಲೂ ಮಾಡಬೇಕಾದ ಕೆಲಸವನ್ನು ಚೆನ್ನಾಗಿ ಮಾಡು. ಹೀಗೆ ಫಲದಾಸೆ ಬಿಟ್ಟು ಕರ್ಮ ಮಾಡುತ್ತಲೇ ವ್ಯಕ್ತಿ ಸರ್ವೋತ್ತಮನನ್ನು ಹೊಂದುವನು. |
|
20
|
ಕರ್ಮಣೈವ ಹಿ ಸಂಸಿದ್ಧಿಂ ಆಸ್ಥಿತಾ ಜನಕಾದಯಃ ।
ಲೋಕ-ಸಂ-ಗ್ರಹಮೇವಾಪಿ ಸಂ-ಪಶ್ಯನ್ ಕರ್ತುಮರ್ಹಸಿ ॥ |
|
ಜನಕ ಮುಂತಾದ ರಾಜರು ಕರ್ಮದಿಂದಲೇ ಮೋಕ್ಷವನ್ನು ಪಡೆದರು. ಜನಸಾಮಾನ್ಯರ ಶಿಕ್ಷಣವನ್ನು ತಿಳಿದಾದರೂ ನೀನು ಕರ್ತವ್ಯವನ್ನು ಮಾಡುವುದು ಯೋಗ್ಯವೇ. |
|
21
|
ಯದ್ಯದಾಚರತಿ ಶ್ರೇಷ್ಠಃ ತತ್ತದೇವೇತರೋ ಜನಃ ।
ಸ ಯತ್ ಪ್ರಮಾಣಂ ಕುರುತೇ ಲೋಕಸ್ತದನು-ವರ್ತತೇ ॥ |
|
ದೊಡ್ಡವನು ಏನೆಲ್ಲ ಮಾಡುತ್ತಾನೋ ಅದನ್ನೇ ಜನಸಾಮಾನ್ಯ ಮಾಡುತ್ತಾನೆ. ಅವನು ಯಾವುದನ್ನು ಸರಿ ಎಂದು ಮಾಡುತ್ತಾನೋ ಅದನ್ನೇ ಜನ ಅನುಸರಿಸುತ್ತದೆ. |
|
22
|
ನ ಮೇ ಪಾರ್ಥಾಸ್ತಿ ಕರ್ತವ್ಯಂ ತ್ರಿಷು ಲೋಕೇಷು ಕಿಂಚನ ।
ನಾನವಾಪ್ತಮವಾಪ್ತವ್ಯಂ ವರ್ತ ಏವ ಚ ಕರ್ಮಣಿ ॥ |
|
ಓ ಪಾರ್ಥನೆ, ಮೂರು ಲೋಕಗಳಲ್ಲೂ ನಾನು ಮಾಡಬೇಕಾದ್ದು ಏನೂ ಇಲ್ಲ. ನನಗೇನೂ ಸಿಗದಿದ್ದದ್ದು, ಸಿಗಬೇಕಾದ್ದೂ ಇಲ್ಲ. ಆದರೂ ಕರ್ಮವನ್ನು ನಡೆಸುತ್ತಲೆ ಇದ್ದೇನೆ. |
|
23
|
ಯದಿ ಹ್ಯಹಂ ನ ವರ್ತೇಯಂ ಜಾತು ಕರ್ಮಣ್ಯತಂದ್ರಿತಃ ।
ಮಮ ವರ್ತ್ಮಾನು-ವರ್ತಂತೇ ಮನುಷ್ಯಾಃ ಪಾರ್ಥ ಸರ್ವಶಃ ॥ |
|
ಓ ಪಾರ್ಥನೆ, ನಾನು ಒಮ್ಮೆಯೂ ತಪ್ಪದೆ ಕೆಲಸ ಮಾಡದೆ ಹೋದರೆ, ಮನುಷ್ಯರು ಎಲ್ಲ ರೀತಿಯಿಂದಲೂ ನನ್ನ ದಾರಿಯನ್ನೇ ಅನುಸರಿಸುತ್ತಾರೆ. |
|
24
|
ಉತ್ಸೀದೇಯುರಿಮೇ ಲೋಕಾಃ ನ ಕುರ್ಯಾಂ ಕರ್ಮ ಚೇದಹಮ್ ।
ಸಂಕರಸ್ಯ ಚ ಕರ್ತಾ ಸ್ಯಾಂ ಉಪಹನ್ಯಾಮಿಮಾಃ ಪ್ರಜಾಃ ॥ |
|
ನಾನು ಒಂದೊಮ್ಮೆ ಕರ್ಮ ಮಾಡದೇ ಇದ್ದರೆ ಈ ಜನರೆಲ್ಲ ಒಂದೋ ಕರ್ಮ ಮಾಡುವುದಿಲ್ಲ, ಅಥವಾ ತಪ್ಪಾಗಿ ಆಚರಿಸಿ ಹಾಳಾಗುತ್ತಾರೆ. ಈ ಗೊಂದಲಕ್ಕೆ ನಾನೇ ಕಾರಣನಾದೇನು. ಈ ಜನರನ್ನು ನಾನೇ ಹಾನಿಗೊಳಿಸಿದಂತೆ. |
|
25
|
ಸಕ್ತಾಃ ಕರ್ಮಣ್ಯವಿದ್ವಾಂಸೋ ಯಥಾ ಕುರ್ವಂತಿ ಭಾರತ ॥
ಕುರ್ಯಾದ್ ವಿದ್ವಾಂಸ್ತಥಾಸಕ್ತಃ ಚಿಕೀರ್ಷುರ್ಲೋಕ-ಸಂಗ್ರಹಮ್ ॥ |
|
ಓ ಭಾರತನೇ, ತಿಳಿಯದವರು ಫಲದಾಸೆಯಿಂದ ಕೆಲಸ ಮಾಡುತ್ತಾರೆ. ತಿಳಿದವನು ಫಲದಾಸೆ ಬಿಟ್ಟು ಕೆಲಸ ಮಾಡುತ್ತಿರಬೇಕು; ಜನರಿಗೆ ತಿಳಿಸಿಕೊಡಲು ಕರ್ಮ ಮಾಡುತ್ತಲೆ ಇರಬೇಕು. |
|
26
|
ನ ಬುದ್ಧಿ-ಭೇದಂ ಜನಯೇತ್ ಅಜ್ಞಾನಾಂ ಕರ್ಮ-ಸಂಗಿನಾಮ್ ।
ಜೋಷಯೇತ್ ಸರ್ವ-ಕರ್ಮಾಣಿ ವಿದ್ವಾನ್ ಯುಕ್ತಃ ಸಮಾಚರನ್ ॥ |
|
ಫಲದ ಆಸೆಯಿಂದ ದುಡಿವ, ತಿಳಿಯದ ಜನರ ಬುದ್ಧಿಯನ್ನು ತಿಳಿದವನು ಗೊಂದಲಗೊಳಿಸಬಾರದು. ಕರ್ಮಯೋಗವನ್ನು ಅರಿತವನಿವನು ಎಲ್ಲ ಕೆಲಸಗಳನ್ನೂ ಚೆನ್ನಾಗಿ ನಡೆಸುತ್ತ, ಅಜ್ಞರ ಎಲ್ಲ ಕೆಲಸಗಳನ್ನು ಆದರದಿಂದಲೇ ಸರಿಗೊಳಿಸಬೇಕು. |
|
27
|
ಪ್ರಕೃತೇಃ ಕ್ರಿಯಮಾಣಾನಿ ಗುಣೈಃ ಕರ್ಮಾಣಿ ಸರ್ವಶಃ ।
ಅಹಂಕಾರ-ವಿಮೂಢಾತ್ಮಾ ಕರ್ತಾಹಮಿತಿ ಮನ್ಯತೇ ॥ |
|
ಎಲ್ಲ ಕರ್ಮಗಳೂ ಜೀವನ ಸಹಜ ಗುಣಗಳಿಂದ ನಡೆಯುತ್ತವೆ. ದುರಹಂಕಾರಿಯು ನಾನೇ ಮಾಡಿದವನು ಎಂದು ಭಾವಿಸುತ್ತಾನೆ. |
|
28
|
ತತ್ತ್ವ-ವಿತ್ತು ಮಹಾಬಾಹೋ ಗುಣ-ಕರ್ಮ-ವಿಭಾಗಯೋಃ ।
ಗುಣಾ ಗುಣೇಷು ವರ್ತಂತೇ ಇತಿ ಮತ್ವಾ ನ ಸಜ್ಜತೇ ॥ |
|
ಓ ಮಹಾಬಾಹುವೆ, ಗುಣಗಳ ಮತ್ತು ಕರ್ಮಗಳ ವಿಶೇಷತೆಯನ್ನು ಸರಿಯಾಗಿ ತಿಳಿದವನು, ಇಂದ್ರಿಯಗಳು ವಿಷಯಗಳಲ್ಲಿ ನಿಂತಿವೆ ಎಂದು ತಿಳಿಯುತ್ತ ಅವುಗಳಲ್ಲಿ ಅಂಟಿಕೊಳ್ಳುವುದಿಲ್ಲ. |
|
29
|
ಪ್ರಕೃತೇರ್ಗುಣ-ಸಮ್ಮೂಢಾಃ ಸಜ್ಜಂತೇ ಗುಣ-ಕರ್ಮಸು ।
ತಾನಕೃತ್ಸ್ನ-ವಿದೋ ಮಂದಾನ್ ಕೃತ್ಸ್ನ-ವಿನ್ನ ವಿಚಾಲಯೇತ್ ॥ |
|
ಪ್ರಕೃತಿಯ ಅಂಗಗಳಾದ ಇಂದ್ರಿಯಗಳಲ್ಲಿಯೆ ಪೂರ್ತಿ ಆಸಕ್ತರು ಗುಣಕರ್ಮಗಳಲ್ಲೆ ಅಂಟಿಕೊಳ್ಳುತ್ತಾರೆ. ಅರೆಬರೆ ತಿಳಿದ ಅಂಥ ದಡ್ಡರನ್ನು ಪೂರ್ತಿ ಚೆನ್ನಾಗಿ ತಿಳಿದವ ಗೊಂದಲಗೊಳಿಸಬಾರದು. |
|
30
|
ಮಯಿ ಸರ್ವಾಣಿ ಕರ್ಮಾಣಿ ಸಂನ್ಯಸ್ಯಾಧ್ಯಾತ್ಮ-ಚೇತಸಾ ।
ನಿರಾಶೀರ್ನಿರ್ಮಮೋ ಭೂತ್ವಾ ಯುಧ್ಯಸ್ವ ವಿಗತ-ಜ್ವರಃ ॥ |
|
ನಾನು ಸರ್ವೋತ್ತಮನೆಂದು ತಿಳಿದು ನನಗೆ ನಿನ್ನ ಎಲ್ಲ ಕರ್ಮಗಳನ್ನು ಸಮರ್ಪಿಸು. ಫಲದಾಸೆ ಬಿಡು. ನಾನು ಮಾಡುವೆನೆಂದೂ ತಿಳಿಯದಿರು. ಸಂಕಟ ಬಿಟ್ಟು ಹೋರಾಡು. |
|
31
|
ಯೇ ಮೇ ಮತಮಿದಂ ನಿತ್ಯಂ ಅನು-ತಿಷ್ಠಂತಿ ಮಾನವಾಃ ।
ಶ್ರ್ರದ್ಧಾವಂತೋಽನಸೂಯಂತೋ ಮುಚ್ಯಂತೇ ತೇಽಪಿ ಕರ್ಮಭಿಃ ॥ |
|
ನನ್ನ ಈ ಅಭಿಪ್ರಾಯದಂತೆ ಅಸೂಯೆ ತೊರೆದು ಶ್ರದ್ಧೆಯಿಂದ ನಿತ್ಯವೂ ಯಾರು ಕರ್ಮವನ್ನು ನಡೆಸುತ್ತಾರೋ ಅವರು ಕರ್ಮಬಂಧನದಿಂದ ಬಿಡುಗಡೆ ಪಡೆಯುತ್ತಾರೆ. |
|
32
|
ಯೇ ತ್ವೇತದಭ್ಯಸೂಯಂತೋ ನಾನು-ತಿಷ್ಠಂತಿ ಮೇ ಮತಮ್ ।
ಸರ್ವ-ಜ್ಞಾನ-ವಿಮೂಢಾಂಸ್ತಾನ್ ವಿದ್ಧಿ ನಷ್ಟಾನಚೇತಸಃ ॥ |
|
ನನ್ನ ಈ ಮತವನ್ನು ದ್ವೇಷಿಸುತ್ತ ಅನುಸರಿಸದವರು ಯಾವುದನ್ನೂ ತಿಳಿವ ಯೋಗ್ಯತೆಯಿರದ ದಡ್ಡರಾಗಿಯೇ ನಾಶ ಹೊಂದುವರು. |
|
33
|
ಸದೃಶಂ ಚೇಷ್ಟತೇ ಸ್ವಸ್ಯಾಃ ಪ್ರಕೃತೇರ್ಜ್ಞಾನ-ವಾನಪಿ ।
ಪ್ರಕೃತಿಂ ಯಾಂತಿ ಭೂತಾನಿ ನಿಗ್ರಹಃ ಕಿಂ ಕರಿಷ್ಯತಿ ॥ |
|
ತಿಳಿದವನು ತನ್ನ ಸ್ವಭಾವಕ್ಕೆ ಸಮನಾಗಿಯೇ ಕೆಲಸ ಮಾಡುತ್ತಾನೆ. ಎಲ್ಲ ಜೀವಿಗಳು ತಮ್ಮತಮ್ಮ ಸ್ವಭಾವದಂತೆ ಇವೆ. ಬಲಾತ್ಕಾರದಿಂದ ಬದಲಾವಣೆ ಏನೂ ಆಗದು ! |
|
34
|
ಇಂದ್ರಿಯಸ್ಯೇಂದ್ರಿಯಸ್ಯಾರ್ಥೇ ರಾಗ-ದ್ವೇಷೌ ವ್ಯವಸ್ಥಿತೌ ।
ತಯೋರ್ನ ವಶಮಾಗಚ್ಛೇತ್ ತೌ ಹ್ಯಸ್ಯ ಪರಿ-ಪಂಥಿನೌ ॥ |
|
ರಾಗ ಮತ್ತು ದ್ವೇಷ (ಬೇಕು-ಬೇಡಗಳು) ಪ್ರತಿಯೊಂದು ಇಂದ್ರಿಯದ ವಿಷಯದಲ್ಲಿಯೂ ವಿಪರೀತವಾಗಿ ಇವೆ. ರಾಗ-ದ್ವೇಷಗಳಿಗೆ ಒಳಗಾಗಲೇಬಾರದು. ಇವೆರಡೇ ಸಾಧಕನಿಗೆ ಅಡ್ಡಿಗಳು. |
|
35
|
ಶ್ರೇಯಾನ್ ಸ್ವ-ಧರ್ಮೋ ವಿಗುಣಃ ಪರ-ಧರ್ಮಾತ್ ಸ್ವನುಷ್ಠಿತಾತ್ ।
ಸ್ವ-ಧರ್ಮೇ ನಿಧನಂ ಶ್ರೇಯಃ ಪರ-ಧರ್ಮೋ ಭಯಾವಹಃ ॥ |
|
(ತನ್ನ ಸ್ವಭಾವಕ್ಕೆ ತಕ್ಕುದಾದ ಕರ್ಮ ಸ್ವಧರ್ಮ. ತನಗೆ ಹೇಳಿಸಿದ್ದಲ್ಲದ, ಬೇರೆಯವರಿಗೆ ಹೇಳಿದ ಕರ್ಮ ಪರಧರ್ಮ.) ಪರಧರ್ಮವನ್ನು ಚೆನ್ನಾಗಿ ನಡೆಸುವುದಕ್ಕಿಂತ ತಪ್ಪಾಗಿಯಾದರೂ ತನ್ನ ಧರ್ಮವನ್ನು ನಡೆಸುವುದು ತುಂಬಾ ಶ್ರೇಷ್ಠ. ಸ್ವಧರ್ಮವನ್ನು ನಡೆಸುತ್ತಾ ಸತ್ತರೂ ಒಳಿತೇ ಆಗಲಿದೆ. ಪರಕೀಯ ಧರ್ಮವು ಭಯವನ್ನುಂಟು ಮಾಡುವುದು. |
|
ಅರ್ಜುನ
ಉವಾಚ
|
|
36
|
ಅಥ ಕೇನ ಪ್ರಯುಕ್ತೋಽಯಂ ಪಾಪಂ ಚರತಿ ಪೂರುಷಃ ।
ಅನಿಚ್ಛನ್ನಪಿ ವಾರ್ಷ್ಣೇಯ ಬಲಾದಿವ ನಿಯೋಜಿತಃ ॥ |
|
ಅರ್ಜುನನು ಪ್ರಶ್ನಿಸುತ್ತಾನೆ - ಓ ವೃಷ್ಣಿವಂಶದ ಕೃಷ್ಣನೆ, ಕೆಟ್ಟದ್ದನ್ನು ನಡೆಸಬೇಕೆಂದು ಇಚ್ಛಿಸದಿದ್ದರೂ ಈ ಮನುಷ್ಯನು ಯಾವುದೋ ಬಲದಿಂದ ತಪ್ಪು ಮಾಡುತ್ತಾನೆ. ಅಂದರೆ ಇದು ಯಾರಿಂದ ಆದದ್ದು? |
|
ಭಗವಾನ್
ಉವಾಚ
|
|
37
|
ಕಾಮ ಏಷಃ ಕ್ರೋಧ ಏಷಃ ರಜೋಗುಣ-ಸಮುದ್ಭವಃ ।
ಮಹಾಶನೋ ಮಹಾಪಾಪ್ಮಾ ವಿದ್ಧ್ಯೇನಮಿಹ ವೈರಿಣಮ್ ॥ |
|
ಕೃಷ್ಣನು ಉತ್ತರಿಸುತ್ತಾನೆ - ರಜೋಗುಣದಿಂದ ಹುಟ್ಟುವ ಕಾಮವಿದು, ಕೋಪವಿದು - ಎಲ್ಲವನ್ನೂ ಕಬಳಿಸುವುದು. ಎಲ್ಲಾ ಪಾಪಾಚಾರಗಳನ್ನೂ ನಡೆಸುವುದು. ಇಲ್ಲಿ ಸಾಧನೆಯಲ್ಲಿ ಆಸೆಯನ್ನೂ ಸಿಟ್ಟನ್ನೂ ಶತ್ರುವನ್ನಾಗಿ ತಿಳಿ. |
|
38
|
ಧೂಮೇನಾವ್ರಿಯತೇ ವಹ್ನಿಃ ಯಥಾದರ್ಶೋ ಮಲೇನ ಚ ।
ಯಥೋಲ್ಬೇನಾವೃತೋ ಗರ್ಭಃ ತಥಾ ತೇನೇದಮಾವೃತಮ್ ॥ |
|
ಹೊಗೆಯಿಂದ ಬೆಂಕಿ ಮುಚ್ಚಿದಂತೆ, ಕೊಳೆಯಿಂದ ಕನ್ನಡಿ ಮಸುಕಾದಂತೆ, ಗರ್ಭಕೋಶದಿಂದ ಭ್ರ್ರೂಣ ಆವರಿಸಿದಂತೆ, ಕಾಮದಿಂದ ಇದೆಲ್ಲವೂ ಆವರಿಸಲ್ಪಟ್ಟಿದೆ. |
|
39
|
ಆವೃತಂ ಜ್ಞಾನಮೇತೇನ ಜ್ಞಾನಿನೋ ನಿತ್ಯ-ವೈರಿಣಾ ।
ಕಾಮ-ರೂಪೇಣ ಕೌಂತೇಯ ದುಷ್ಪೂರೇಣಾನಲೇನ ಚ ॥ |
|
ಓ ಕೌಂತೇಯನೆ, ಸಾಕೆನಿಸದ, ಪೂರ್ತಿಗೊಳಿಸಲಾಗದ ಕಾಮವು ಜ್ಞಾನಿಯ ನಿತ್ಯಶತ್ರುವಾಗಿ ಅವನ ಜ್ಞಾನವನ್ನು ಆಕ್ರಮಿಸುತ್ತದೆ. |
|
40
|
ಇಂದ್ರಿಯಾಣಿ ಮನೋ ಬುದ್ಧಿಃ ಅಸ್ಯಾಧಿಷ್ಠಾನಮುಚ್ಯತೇ ।
ಏತೈರ್ವಿಮೋಹಯತ್ಯೇಷಃ ಜ್ಞಾನಮಾವೃತ್ಯ ದೇಹಿನಮ್ ॥ |
|
ಇಂದ್ರಿಯಗಳು, ಮನಸ್ ಮತ್ತು ಬುದ್ಧಿ ಕಾಮದ ತಾಣಗಳು. ಕಾಮವು ಇಲ್ಲಿದ್ದುಕೊಂಡೆ ಸಾಧಕನ ಜ್ಞಾನವನ್ನು ಆಕ್ರಮಿಸಿ ಆತನನ್ನು ತಪ್ಪುದಾರಿಗೆ ಎಳೆಯುತ್ತದೆ. |
|
41
|
ತಸ್ಮಾತ್ ತ್ವಮಿಂದ್ರಿಯಾಣ್ಯಾದೌ ನಿಯಮ್ಯ ಭರತರ್ಷಭ ।
ಪಾಪ್ಮಾನಂ ಪ್ರಜಹಿ ಹ್ಯೇನಂ ಜ್ಞಾನ-ವಿಜ್ಞಾನ-ನಾಶನಮ್ ॥ |
|
ಓ ಭರತವಂಶಶ್ರೇಷ್ಠನೆ, ನೀನು ಮೊದಲು ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟು, ಆತ್ಮನ ಮತ್ತು ಪರಮಾತ್ಮನ ಎಚ್ಚರವನ್ನು ಅಳಿಸುವ ಈ ಕೆಟ್ಟ ಕೆಲಸ ಮಾಡಿಸುವ ಕಾಮವನ್ನು ಹೊಡೆದು ಹೊರಗೆ ಹಾಕು. |
|
42
|
ಇಂದ್ರಿಯಾಣಿ ಪರಾಣ್ಯಾಹುಃ ಇಂದ್ರಿಯೇಭ್ಯಃ ಪರಂ ಮನಃ ।
ಮನಸ್ತಸ್ತು ಪರಾ ಬುದ್ಧಿಃ ಯೋ ಬುದ್ಧೇಃ ಪರತಸ್ತು ಸಃ ॥ |
|
ಇಂದ್ರಿಯಗಳು ದೇಹಕ್ಕಿಂತ ಮಿಗಿಲು. ಇಂದ್ರಿಯಗಳಿಗಿಂತ ಮನಸ್ ಶ್ರೇಷ್ಠ. ಮನಸ್ಸಿಗಿಂತ ಬುದ್ಧಿ ಉತ್ತಮ. ಬುದ್ಧಿಗೂ ನಿಲುಕದ ಆಚಿನ ಸಂಗತಿ ದೇವರು. |
|
43
|
ಏವಂ ಬುದ್ಧೇಃ ಪರಂ ಬುದ್ಧ್ವಾಸಂಸ್ತಭ್ಯಾತ್ಮಾನಮಾತ್ಮನಾ ।
ಜಹಿ ಶತ್ರುಂ ಮಹಾಬಾಹೋ ಕಾಮ-ರೂಪಂ ದುರಾಸದಮ್ ॥ |
|
ಓ ಮಹಾಬಾಹುವೆ, ಹೀಗೆ ಬುದ್ಧಿಗೂ ಎಟುಕದ ಪರಮಾತ್ಮನನ್ನು ತಿಳಿದು, ತನ್ನನ್ನು ತಾನೇ ಬೆಂಬಲಿಸಿ, ಬಹಳ ಪ್ರಯತ್ನದಿಂದ ವೈರಿಯಂತಿರುವ ಕಾಮನನ್ನು ಹೊಡೆದು ಹೊರಗೆ ಹಾಕು. |